ಆರೋಗ್ಯವಿದ್ದರೆ ಎಲ್ಲ ಸಂಪತ್ತೂ ಇದ್ದಂತೆ ಎಂಬುದು ಅನುಭವದ ಮಾತು. ಕೋವಿಡ್ ಸಾಂಕ್ರಾಮಿಕದಿಂದಾಗಿ ಮದುವೆ, ಮುಂಜಿ, ಶ್ರಾದ್ಧ, ಸೀಮಂತ, ಆರಾಧನೆ, ಸಮಾರಾಧನೆ, ಶಾಲಾ ಕಾಲೇಜು ಎಲ್ಲವೂ ಹಿಂದಿನಂತೆ ಪೂರ್ಣಪ್ರಮಾಣದಲ್ಲಿ ನಡೆಯದಿರುವುದು ಮಕ್ಕಳಿಗೂ ತಿಳಿದ ವಿಚಾರ. ಆದರೆ ಸಾಹಿತ್ಯ ಸಮ್ಮೇಳನವೆಂಬ ಜಾತ್ರೆಯನ್ನು ನಡೆಸಲೇಬೇಕೆಂದು ತೀರ್ಮಾನಿಸಿ ಕೆಲವರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ! ವೇದಿಕೆಯಲ್ಲಿ ಭಾವೋದ್ವೇಗದಿಂದ ಏನನ್ನು ಬೇಕಾದರೂ ಹೇಳಬಹುದು. ಅದರೆ ಮೊದಲು ಅನ್ನ, ಆರೋಗ್ಯ. ಆನಂತರ ಸಾಹಿತ್ಯ, ಸಂಗೀತ, ಕ್ರೀಡೆ, ನಾಟ್ಯ ಎಲ್ಲವೂ.
ಬಣ್ಣದ ಬದುಕಿನಿಂದಲೇ ಸಂಸಾರವನ್ನು ನಿರ್ವಹಿಸುತ್ತಿರುವ ರಂಗಕಲಾವಿದರು, ಸಾಹಿತ್ಯದ ಮಾನವೀಯ ಮೌಲ್ಯವನ್ನು ನಾಟ್ಯ, ಸಂಗೀತದ ಮೂಲಕ ಪ್ರಚುರಪಡಿಸುತ್ತಿರುವ ಯಕ್ಷಗಾನ ಕಲಾವಿದರಂತಹವರ ಅನೇಕ ಸಂಸಾರಗಳು ಕೋವಿಡ್ ಬಿಕ್ಕಟ್ಟಿನಿಂದ ಬೀದಿಯ ಅಂಚಿಗೆ ಬಂದಿರುವ ದುಃಸ್ಥಿತಿಯ ಸಂದರ್ಭದಲ್ಲಿ, ಸಾಹಿತ್ಯಸಂತೆ ನಡೆಸುವುದು ಎಷ್ಟು ಸರಿ ಎಂಬುದನ್ನು ಪ್ರಜ್ಞಾವಂತರು ಯೋಚಿಸಬೇಕಾಗಿದೆ.
ದೀರ್ಘಕಾಲದ ರಜೆಯಿಂದ ಏರುಪೇರಾಗಿರುವ ಮಕ್ಕಳ ಕಲಿಕೆಯನ್ನು ಸರಿಪಡಿಸುವುದು ಶಿಕ್ಷಕರಿಗೆ ಸವಾಲಾಗಿದೆ. ಕೆಲ ಶಾಲೆಗಳ ಸಿಬ್ಬಂದಿಗೆ ಅರ್ಧ ಸಂಬಳವೂ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಸುವ್ಯವಸ್ಥೆ ಇಲ್ಲ. ಸಮಾರಂಭಗಳಲ್ಲಿ ಆಮಂತ್ರಿತರ ಸಂಖ್ಯೆಯನ್ನು ಮಿತಿಗೆ ಒಳಪಡಿಸಲಾಗುತ್ತಿದೆ. ಇಂತಹ ದುರ್ದಿನಗಳಲ್ಲಿ ಜನಸಾಮಾನ್ಯರ ಹಿತವನ್ನು ಕಡೆಗಣಿಸಿ ಸಮ್ಮೇಳನ ನಡೆಸುವುದು ಎಷ್ಟು ಸಮಂಜಸ?
ರಾಮಸುಬ್ರಾಯ ಶೇಟ್, ಸೂರಿ ಶ್ರೀನಿವಾಸ್, ಬಿ.ಸಿ.ಜಯರಾಮ್, ಶಿವಮೊಗ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.