ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ನಪಾಸುರಹಿತ ಪ್ರಯೋಗ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ನಪಾಸು ಮಾಡುವುದು ನಿಮ್ಮ ಉದ್ದೇಶವಲ್ಲದಿದ್ದರೆ ಪಬ್ಲಿಕ್ ಪರೀಕ್ಷೆಯ ಉದ್ದೇಶವಾದರೂ ಏನು? ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆಯು ಈ ಹಿಂದೆ ಕರ್ನಾಟಕದಲ್ಲಿಯೇ ಎರಡು– ಮೂರು ಬಾರಿ ಪ್ರಯೋಗವಾಗಿದೆ, ಅಂತೆಯೇ ವಿಫಲವಾಗಿದೆ. ನೀವು ಯಾವ ವರ್ಷದಿಂದ ಪಬ್ಲಿಕ್ ಪರೀಕ್ಷೆ ನಡೆಸಿದರೂ ಒಂದಷ್ಟು ವಿದ್ಯಾರ್ಥಿಗಳ ಶಿಕ್ಷಣವು ಏಳನೇ ತರಗತಿಗೆ ಮೊಟುಕುಗೊಳ್ಳುವುದು ಸೂರ್ಯ ಪ್ರಕಾಶದಷ್ಟೇ ಸತ್ಯ. ತಳಸಮುದಾಯದ ಜಾತಿ–ವರ್ಗಗಳು ಈಗಷ್ಟೇ ಅಕ್ಷರ ಪ್ರಪಂಚದಲ್ಲಿ ಅಂಬೆಗಾಲಿಡುತ್ತಿವೆ. ಈ ಪ್ರಯೋಗವು ಭೀಕರ ಅಡ್ಡ ಪರಿಣಾಮಗಳಿಗೂ ಕಾರಣವಾಗಬಹುದು. ಬಹುತೇಕ ಕಣ್ಮರೆಯಾಗಿರುವ ಬಾಲಕಾರ್ಮಿಕ ಪದ್ಧತಿಗೆ ಕುಮ್ಮಕ್ಕು ನೀಡಬಹುದು. ನಪಾಸಾದ ವಿದ್ಯಾರ್ಥಿನಿಯರು ಬಾಲ್ಯವಿವಾಹಕ್ಕೂ ಒಳಗಾಗಬಹುದು.
‘ಸಾವಿರಾರು ಹಿರಿಯ ಪ್ರಾಥಮಿಕ ಶಾಲೆಗಳು ಮುಚ್ಚಿವೆ. ಮೂರು ಸಾವಿರ ಶಾಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಅವುಗಳನ್ನು ಬೇರೆ ಶಾಲೆಗಳಿಗೆ ಜೋಡಿಸಬೇಕಿದೆ’ ಎಂಬುದಾಗಿ ಸಚಿವರೇ ಮಾಹಿತಿ ಕೊಟ್ಟಿದ್ದಾರೆ.ನಿಜವಾಗಿ ಹೇಳಬೇಕೆಂದರೆ, ಏಳನೇ ತರಗತಿಗೆ ಬೇಕಾಗಿರುವುದು ಪಬ್ಲಿಕ್ ಪರೀಕ್ಷೆ ಅಲ್ಲ, ಶಾಲೆಗಳ ಸಬಲೀಕರಣ. ಬಹುತೇಕ ಸರ್ಕಾರಿ ಶಾಲೆಗಳ ಕಟ್ಟಡಗಳು ದುಃಸ್ಥಿತಿಯಲ್ಲಿವೆ. ಕನಿಷ್ಠ ಮೂಲ ಸೌಕರ್ಯಗಳೂ ಬಹುತೇಕ ಶಾಲೆಗಳಲ್ಲಿ ಇಲ್ಲ. ‘ಡಿಜಿಟಲ್ ಇಂಡಿಯಾ’ದ ಭಾಗವಾಗಿ ಶಾಲೆಗಳಿಗೆ ಆಧುನಿಕ ಸ್ಪರ್ಶ ಬೇಕಾಗಿದೆ. ‘ಫಿಟ್ ಇಂಡಿಯಾ’ದ ಭಾಗವಾಗಿ ಎಲ್ಲಾ ಹಿರಿಯ ಪ್ರಾಥಮಿಕ ಶಾಲೆಗಳಿಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಬೇಕಿದೆ.
– ಗಿರೀಶ್ ಎಂ.ಬಿ., ಹೊದಿಗೆರೆ, ಚನ್ನಗಿರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.