ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ‘ಮಹಿಳೆ ಮತ್ತು ಸಾಂವಿಧಾನಿಕ ಹಕ್ಕು’ ಲೇಖನದಲ್ಲಿ ಕೆ.ಬಿ.ಕೆ. ಸ್ವಾಮಿ ವಿಶ್ಲೇಷಿಸಿದ್ದಾರೆ (ಪ್ರ.ವಾ., ನ. 20). ಪ್ರಜಾಪ್ರಭುತ್ವದಲ್ಲಿ ಜನರ ರಕ್ಷಣೆಗೆ ಇರುವ ಸಂವಿಧಾನ ಮತ್ತು ಕಾನೂನುಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಜನರ ಜ್ಞಾನ ಅಷ್ಟಕ್ಕಷ್ಟೆ. ಇನ್ನು ಅದೇ ಜನಸಾಮಾನ್ಯರೇ ಅಸಮಾನತೆಯನ್ನು ಬೋಧಿಸುವ, ಲಿಂಗ, ವರ್ಗದ ಆಧಾರದಲ್ಲಿ ಭೇದ ಮಾಡುವ ವೈಯಕ್ತಿಕ, ರೂಢಿಗತ ನಂಬಿಕೆಗಳಿಗೆ ಧರ್ಮದ ಆಶ್ರಯದಲ್ಲಿ ಕಾನೂನಿನ ಮಾನ್ಯತೆ ಪಡೆಯಲು
ಪ್ರಯತ್ನಿಸುತ್ತಿರುವಾಗ, ಅವರಿಗೆ ಸಂವಿಧಾನದ ಔಚಿತ್ಯ, ಅಗತ್ಯ ಮತ್ತು ಕಾನೂನಿನ ಸಾರ್ವಭೌಮತ್ವದ ಕುರಿತು ತಿಳಿಹೇಳುವವರು ಯಾರು?
ಧರ್ಮ, ಶಾಸ್ತ್ರಗಳು ಮಾನವರ ಅಳಲಿಗಿಂತ ಮುಖ್ಯವಾದವೇ? ಬಹುಶಃ ಈ ಹಿನ್ನೆಲೆಯಲ್ಲಿಯೇ ರಾಷ್ಟ್ರಕವಿ ಕುವೆಂಪು ಅವರು ಹೇಳಿರುವುದು ‘ಯಾವ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂದು.
ಮಂಜುನಾಥ ಎಸ್.ಎಸ್., ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.