ರಾಜ್ಯದಲ್ಲಿ ಪದವಿ ಕಾಲೇಜುಗಳನ್ನು ನವೆಂಬರ್ 17ರಿಂದ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ. ಕಲಿಕೆಯ ಪರಿಪೂರ್ಣತೆಗೆ ನಿರಂತರತೆ ಮುಖ್ಯ ಎಂಬುದು ನಿಜ. ಆದರೆ ಕಾಲೇಜು ಆರಂಭದಿಂದ ಆಗಬಹುದಾದ ಪರಿಣಾಮ ಗಳನ್ನೂ ಗಮನಿಸಬೇಕು. ವಿದ್ಯಾರ್ಥಿಗಳು ಒಬ್ಬರೊಡನೊಬ್ಬರು ಆತ್ಮೀಯವಾಗಿ ಬೆರೆಯುತ್ತಾರೆ. ಬೇರೆ ಬೇರೆ ಊರುಗಳಿಂದ ಬಂದವರು ಹಾಸ್ಟೆಲ್ನಲ್ಲಿ ಒಂದಾಗಿ ವಾಸಿಸುತ್ತಾರೆ. ಕ್ಯಾಂಟೀನ್ನಲ್ಲಿ ಉಂಡು ನಲಿಯುತ್ತಾರೆ. ಮೈದಾನದಲ್ಲಿ ಒಟ್ಟಾಗಿ ಆಡುತ್ತಾರೆ. ಇವೆಲ್ಲವೂ ಯುವಜನರ ಸಹಜ ಮನಃಸ್ಥಿತಿ. ಇವನ್ನು ನಿಯಂತ್ರಿಸುವುದು ಅಧ್ಯಾಪಕರಿಂದ ಸಾಧ್ಯವಾಗದು. ಹೀಗಾಗಿ ಕಾಲೇಜು ಆರಂಭಕ್ಕೆ ಅವಸರ ಸರಿಯೇ?
ತಜ್ಞ ವೈದ್ಯರ ಅಭಿಪ್ರಾಯದಂತೆ ಡಿಸೆಂಬರ್ ಕೊನೆಯ ವೇಳೆಗೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಬಹುದು. ಆದರೆ ಈಗ ಪರಸ್ಪರ ಬೆರೆಯುವುದು ಹೆಚ್ಚಿದರೆ ಸೋಂಕು ಹಬ್ಬುವಿಕೆ ಪ್ರಮಾಣ ಮತ್ತೆ ಹೆಚ್ಚುತ್ತದೆ. ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಈಗ ಇಂತಹುದೇ ಪರಿಸ್ಥಿತಿ ತಲೆದೋರಿದೆ. ಕೆಲವು ರಾಷ್ಟ್ರಗಳು ಮತ್ತೆ ಲಾಕ್ಡೌನ್ ಘೋಷಿಸಿವೆ. ಹೀಗಾಗಿ ಕಾಲೇಜು ಪುನರಾರಂಭವನ್ನು ಡಿಸೆಂಬರ್ ಕೊನೆಯವರೆಗೂ ಮುಂದೂಡುವುದು ಒಳ್ಳೆಯದು. ಒಂದೆರಡು ತಿಂಗಳಲ್ಲಿ ಕಳೆದುಕೊಳ್ಳುವುದಕ್ಕಿಂತ ಗಳಿಸುವುದೇ ಹೆಚ್ಚು. ಹೀಗಾಗಿ ಸರ್ಕಾರ ಈ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು.
ಕೆ.ಶಿವಸ್ವಾಮಿ, ಮಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.