‘ದುಡ್ಡು ಚೆಲ್ಲದೆ ಚುನಾವಣೆ ಗೆಲ್ಲಿ ನೋಡೋಣ’ ಎಂದು ವಿಧಾನಪರಿಷತ್ ನಲ್ಲಿ ಹಿರಿಯ ಸದಸ್ಯರೊಬ್ಬರು ಸವಾಲು ಎಸೆದಿದ್ದರೆ, ಶಿಕ್ಷಕರು ಅಂಚೆ ಮತ ದಾನಕ್ಕಾಗಿ ಲಂಚ ಕೇಳಿದ ವಿಷಯವನ್ನು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಪ್ರಸ್ತಾಪಿಸಿದ್ದಾರೆ.
ಅಲ್ಲ ಸ್ವಾಮಿ, ರಾಜಕೀಯ ನಾಯಕರೇ, ನಮ್ಮ ಜನರಿಗೆ ದುಡ್ಡು ತಿನ್ನಲು ಕಲಿಸಿದವರು ನೀವೇ ಅಲ್ಲವೇ? ಆ ಪಕ್ಷದವನು ಸಾವಿರವೆಂದರೆ, ಈ ಪಕ್ಷ ದವನು ಎರಡು ಸಾವಿರ ಎನ್ನುತ್ತಾ ಸ್ಪರ್ಧೆಗೆ ಇಳಿದು, ಮತದಾರರನ್ನು ಭ್ರಷ್ಟರ ನ್ನಾಗಿ ಮಾಡಿದ್ದೀರಿ. ಚುನಾವಣೆ ಸಮೀಪಿಸಿದಾಗ ರಾಜಕೀಯ ಪಕ್ಷದವರೆಲ್ಲರೂ ಸಭೆ ಸೇರಿ, ಯಾರೂ ಮತದಾರನಿಗೆ ದುಡ್ಡು ಕೊಡುವ ಹಾಗಿಲ್ಲ ಎಂಬ ನಿರ್ಣಯಕ್ಕೆ ಬನ್ನಿ. ಆಗ ಯಾರು ನಿಮ್ಮನ್ನು ದುಡ್ಡು ಕೇಳುತ್ತಾರೆ?
ನೀವೇ ತಿನ್ನುವುದನ್ನು ಕಲಿಸಿ, ಬಳಿಕ ನೀವೇ ಮತದಾರರ ಮೇಲೆ ಗೂಬೆ ಕೂರಿಸಿದರೆ ಹೇಗೆ? ಜನಸೇವೆ ಮಾಡಲು ದುಡ್ಡಿಲ್ಲದೇ ಆರಿಸಿ ಬರುತ್ತೇನೆ ಎಂಬ ಆತ್ಮವಿಶ್ವಾಸವನ್ನು ಮೊದಲು ಬೆಳೆಸಿಕೊಳ್ಳಿ. ಮತದಾರನಿಗೆ ದುಡ್ಡು ಕೊಡಲು ನಿರಾಕರಿಸಿ. ಎಲ್ಲ ಅಭ್ಯರ್ಥಿಗಳೂ ಹೀಗೆ ಮಾಡಿದರೆ ಆತನಿಗೆ ಬೇರೆ ಆಯ್ಕೆ ಇರದೆ, ಯಾರಿಗಾದರೂ ಮತ ಹಾಕಲೇಬೇಕಾಗುತ್ತದೆ. ಜನಸೇವೆಯ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಮತ ಕೇಳಿ. ಆಗ ಮತಕ್ಕಾಗಿ ದುಡ್ಡು ಕೇಳುವ ಈ ಪಿಡುಗು ತನ್ನಿಂದ ತಾನೇ ನಾಶವಾಗುತ್ತದೆ. ನೀವೇ ಕಲಿಸಿದ ಚಾಳಿಗೆ ನೀವೇ ಇತಿಶ್ರೀ ಹಾಡಲು ಸಂಕಲ್ಪ ತೊಡಿ.
ವೀರೇಶ ಬಂಗಾರಶೆಟ್ಟರ, ಕುಷ್ಟಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.