ವಿಜಯಪುರ: ‘ನೋಡ್ರೀ... ನಿಮ್ ಇಲಾಖೆ ವಿಷಯ ಚರ್ಚೆ ಆರಂಭವಾಯ್ತು ಅನ್ತಿದ್ದಂಗೆ ಎಲ್ರದ್ದೂ ಬಿ.ಪಿ. ಏರುತ್ತೆ. ಕಲ್ಲ್ ತಗೊಂಡು ನಿಮ್ಗ ಬೀಸಿ ಹೊಡೀಬೇಕು ಅನ್ಸುತ್ತೆ... ಆದ್ರೆ ಹೊಡೆಯಂಗಿಲ್ಲ. ನೀವು ಸರ್ಕಾರಿ ನೌಕರರಿದ್ದೀರಿ. ‘ಕರ್ತವ್ಯಕ್ಕೆ ಅಡ್ಡಿಪಡಿಸಿದ್ರು’ ಅಂತ ಕೇಸ್ ಹಾಕ್ತೀರಿ. ನಿಮ್ ಕಾಟ ತಡ್ಕೊಳ್ಳಕ್ಕೆ ಆಗ್ತಿಲ್ರೀ. ನನ್ ಟೆನ್ಷನ್ ಕಮ್ಮಿಯಾಗ್ತಿಲ್ಲ. ವಿಧಿಯಿಲ್ಲದೆ ನಿಮ್ ಜತೆ ಬಡ್ದಾಡೋಕ್ಕಿಂತ ಕಲ್ಲ್ ತಗೊಂಡು ನಾನೇ ಬಡ್ಕೋಬೇಕಾಗೈತಿ...!’
ವಿಜಯಪುರ ಜಿಲ್ಲಾ ಪಂಚಾಯ್ತಿಯಲ್ಲಿ ಈಚೆಗೆ ನಡೆದ ಜಿ.ಪಂ.ನ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪ್ರಹ್ಲಾದ ಟಿ.ಬೊಂಗಾಳೆ ಅವರನ್ನು ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ತರಾಟೆಗೆ ತೆಗೆದುಕೊಂಡ ಪರಿಯಿದು.
‘ಅಲ್ರೀ ಡಿಡಿಪಿಐ, ಮೊದಲೇ ನಿಮ್ ಆರೋಗ್ಯ ಸರಿಯಿಲ್ಲ. ನಿಮ್ ಜತೆ ಅಂಜ್ಕೊಂಡೇ ಮಾತಾಡ್ತೀವಿ. ‘ನಿಮ್ ಸೇವೆ ನಮ್ಗ ಬ್ಯಾಡ’ ಅಂತ ವರ್ಗ ಮಾಡಿಸಿದ್ರೂ, ಕಿರಿಕಿರಿ ಇಲ್ಲದ ಜಾಗ್ದಲ್ಲಿ ನೆಮ್ಮದಿಯಿಂದ ಉದ್ಯೋಗ ಮಾಡೋದ್ ಬಿಟ್ಟು, ಮತ್ಯಾಕ್ರೀ ನಮ್ ಜೀವ ಹಿಂಡಾಕ್ ಬಂದ್ರೀ’ ಎಂದು ದಬಾಯಿಸಿದ್ರು. ಬಹುತೇಕ ಸದಸ್ಯರು ಬೊಂಗಾಳೆ ವಿರುದ್ಧ ಹರಿಹಾಯ್ದರು.
ಶಾಂತಚಿತ್ತರಾಗಿಯೇ ಎಲ್ಲರಿಗೂ ಉತ್ತರಿಸಿದ ಡಿಡಿಪಿಐ, ‘ಸರ್ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೊಳ್ಳಿ ಬಂದ್ವೀನ್ರೀ’ ಅನ್ತಿದ್ದಂತೆ ಸದಸ್ಯರು ಮತ್ತಷ್ಟು ಗರಂ ಆದ್ರು. ಪರಿಸ್ಥಿತಿ ಅರಿತ ಸಿಇಓ ಎಂ. ಸುಂದರೇಶಬಾಬು, ‘ನಾ ಎಲ್ಲ ಸಮಸ್ಯೆ ಪರಿಹರಿಸ್ತೀನಿ’ ಎನ್ನುತ್ತಿದ್ದಂತೆ, ‘ಜೂನ್ನಿಂದಲೂ ಇದೇ ರಾಗ ಕೇಳಿ ಕೇಳಿ ಸಾಕಾಗೈತಿ’ ಎಂದು ಮಹಿಳಾ ಸದಸ್ಯರು ಗೊಣಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.