ADVERTISEMENT

‘ಕಾವೇರಿ’ ಹಾಡು ಮತ್ತು ಪಿಂಕ್‌ ನೋಟು!

ಎಂ.ಎನ್.ಯೋಗೇಶ್‌
Published 12 ಮೇ 2018, 20:21 IST
Last Updated 12 ಮೇ 2018, 20:21 IST

ಮಂಡ್ಯ: ಕಾವೇರಮ್ಮ ಕಾಪಾಡಮ್ಮ... ಕನ್ನಡ ನಾಡಿನ ಜೀವನದಿ ಕಾವೇರಿ... ಈ ಎರಡು ಹಾಡುಗಳು ನಗರದಲ್ಲಿ ಕಳೆದ 15 ದಿನಗಳಿಂದ ಏಕಾಏಕಿ ಪ್ರಸಿದ್ಧಿ ಪಡೆದವು. ಜಿಲ್ಲೆಯಲ್ಲಿ ಕಾವೇರಿ ನದಿ ಹರಿಯುತ್ತದೆ ಎಂಬ ಕಾರಣಕ್ಕಲ್ಲ, ಸುಪ್ರೀಂ ಕೋರ್ಟ್‌ ಆದೇಶದ ಕಾರಣಕ್ಕೂ ಅಲ್ಲ, ಕೆಆರ್‌ಎಸ್‌ ಜಲಾಶಯದಲ್ಲಿ ನೀರಿಲ್ಲ ಎಂಬ ವಿಷಯಕ್ಕೂ ಅಲ್ಲ. ಆದರೂ ಕಾವೇರಿ ಹಾಡುಗಳು ಜನರ ನಾಲಗೆ ಮೇಲೆ ನಲಿದಾಡಿವು. ಕಾರಣವಿಷ್ಟೆ; ‘ಕಾವೇರಿ’ ಅವರು ಎಂಇಪಿ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದ ಕಣದಲ್ಲಿದ್ದರು!

ಕಾವೇರಿ ಅವರು ತಮ್ಮ ಹೆಸರಿನ ಜೊತೆಗೆ ಕಾವೇರಿ ನದಿ, ಕಾವೇರಿ ಹಾಡುಗಳನ್ನು ಬಳಸಿ 15 ದಿನ ಪ್ರಚಾರ ಮಾಡಿದರು. ಪ್ರಚಾರ ವಾಹನಗಳಲ್ಲಿ ‘ಕಾವೇರಿ’ ಕುರಿತಾದ ಹಾಡುಗಳೇ ಜನರ ಕಿವಿಗೆ ಬಿದ್ದವು. ಸಕ್ಕರೆ ನಗರಿಯಲ್ಲಿ ಅವರ ಮುತ್ತಿನಂಥ ಮಾತುಗಳು ಬಹಳ ಸವಿ ಎನಿಸಿದವು. ಚಿಕ್ಕಮಗಳೂರಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಎಂಬಿಎ ಪೂರೈಸಿ, ತಿಂಗಳಿಗೆ ₹ 1.5 ಲಕ್ಷ ಸಂಬಳದ ಕೆಲಸ ತ್ಯಜಿಸಿ ಚುನಾವಣಾ ಕಣಕ್ಕಿಳಿದಿದ್ದ ಅವರನ್ನು ಎಲ್ಲರೂ ‘ಮಂಡ್ಯಕ್ಕೆ ಏಕೆ ಬಂದಿರಿ’ ಎಂದು ಪ್ರಶ್ನಿಸುತ್ತಿದ್ದರು. ಅದಕ್ಕವರು ‘ಮಂಡ್ಯ ನನಗಿಷ್ಟ’ ಎಂದು ನಗುತ್ತಾ ಮುನ್ನಡೆಯುತ್ತಿದ್ದರು.

ಪ್ರಚಾರದ ಕಡೆಯ ದಿನ ‘ಮಂಡ್ಯ ಅನುಭವ ಹೇಗಿತ್ತು’ ಎಂದು ಕೇಳಿದಾಗ ‘ಕೆಲವರು ಪಿಂಕ್‌ ನೋಟು ಕೊಡಿ' ಎಂದು ಕೇಳಿದರು. ಮೊದಲು ನನಗೆ ಅರ್ಥವಾಗಲಿಲ್ಲ. ಆಮೇಲೆ ತಿಳಿಯಿತು, ಅವರು ₹ 2 ಸಾವಿರ ನೋಟು ಕೇಳುತ್ತಿದ್ದಾರೆ ಎಂದು. ಹಣ ಕೇಳಬೇಡಿ, ಇಷ್ಟ ಇದ್ದರೆ ಮತ ಕೊಡಿ, ನಿಮ್ಮ ಸೇವೆ ಮಾಡುತ್ತೇನೆ ಎಂದು ಕಟ್ಟುನಿಟ್ಟಾಗಿ ಹೇಳಿದೆ’ ಎಂದು ಕಾವೇರಿ ತಮ್ಮ ಅನುಭವ ಬಿಚ್ಚಿಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.