ADVERTISEMENT

ಗೃಹಸಚಿವರಿಗೆ ‘ಖಡಕ್‌ ವ್ಯಕ್ತಿತ್ವ’ ಪಾಠ

ಆರ್‌.ಜೆ.ಯೋಗಿತಾ
Published 11 ನವೆಂಬರ್ 2017, 19:30 IST
Last Updated 11 ನವೆಂಬರ್ 2017, 19:30 IST

ಬೆಂಗಳೂರು: ‘ನೀವು ಬಹಳ ನಯವಾಗಿ ಮಾತನಾಡುತ್ತೀರಿ. ಸಾರಿಗೆ ಸಚಿವರಾಗಿದ್ದಾಗ ಅದು ಸರಿಹೊಂದುತ್ತಿತ್ತು. ಈಗ ನೀವು ರಾಜ್ಯದ ಗೃಹ ಸಚಿವರು, ಸ್ವಲ್ಪ ಖಡಕ್‌ ಆಗಿರಬೇಕು...’

ಗೃಹಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಉದ್ಯಮಿ ಕೋಟೇಶ್ವರ ಸೂರ್ಯನಾರಾಯಣ ರಾವ್‌ ಅವರು ನೀಡಿದ ಸಲಹೆ ಇದು.

ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್‌ಕೆಸಿಸಿಐ) ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ರಾವ್‌ ಅವರು ಲಘು ಧಾಟಿಯಲ್ಲೇ ಸಲಹೆ ನೀಡಿದರೂ ಗೃಹಸಚಿವರು ಅದನ್ನು ಲಘುವಾಗಿ ಸ್ವೀಕರಿಸಲಿಲ್ಲ. ಅಲ್ಲಿಯವರೆಗೂ ನಯವಾಗಿ ಮಾತನಾಡುತ್ತಿದ್ದ ಸಚಿವರು, ಈ ಸಲಹೆ ಕೇಳಿ ಕೊಂಚ ಗರಂ ಆದರು. ‘ನಾನು ಪೊಲೀಸ್‌ ಅಧಿಕಾರಿಗಳೊಂದಿಗೆ ನಡೆಸುವ ಸಭೆಗಳಲ್ಲಿ ಹೇಗೆ ಮಾತನಾಡುತ್ತೇನೆ ಎಂದು ನಿಮಗೆ ಗೊತ್ತೇನ್ರಿ? ಈ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗುವ ವರದಿಗಳನ್ನು, ವಾಹಿನಿಗಳಲ್ಲಿ ನನ್ನ ಸಂದರ್ಶನಗಳನ್ನು ನೋಡಿದಿದ್ದರೆ ನೀವು ಹೀಗೆ ಹೇಳುತ್ತಿರಲಿಲ್ಲ. ಎಲ್ಲಿ ಹೇಗೆ ಮಾತನಾಡಬೇಕು ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ’ ಎಂದು ಖಡಕ್‌ ಆಗಿಯೇ ಉತ್ತರ ನೀಡಿದರು.

ADVERTISEMENT

ಸಲಹೆ ನೀಡಿದ ಉದ್ಯಮಿ, ಗೃಹ ಸಚಿವರ ಮಾತಿನ ವೈಖರಿ ನೋಡಿ, ಮೈಕ್‌ ಪಕ್ಕಕ್ಕೆ ಸರಿಸಿ ಸುಮ್ಮನಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.