ADVERTISEMENT

ದೂರದೂರು

(ಗಜಲ್)

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 19:30 IST
Last Updated 8 ಮಾರ್ಚ್ 2014, 19:30 IST

ನಟ್ಟನಡುರಾತ್ರಿಯಲಿ ಕೆಟ್ಟಕನಸು ಬಿದ್ದಾಗ ಅನಿಸುವುದು ‘ತಪ್ಪು ಮಾಡಿದೆ’
ನನ್ನದಲ್ಲದೂರಲ್ಲಿ ನೀರಿಲ್ಲದ ಮೀನು ನಾನು. ಬಂದು ಏನು ಹೊಂದಿದೆ?

ತಟ್ಟೆ ತುಂಬ ಅನ್ನ, ರಟ್ಟೆ ಗಾತ್ರ ಸ್ನೇಹ ಬಿಟ್ಟು ಜುಟ್ಟುಹೂವ ಬಯಸಿಬಂದೆ
ಮರಳಿನಲ್ಲಿ ಹೂತ ಕಾಲು, ನೋವಿನಲ್ಲಿ ಒಂಟಿಹೆಗಲು ಎಲ್ಲ ಶೂನ್ಯವಾಗಿದೆ

ಸೋಲಿಗಾಗಿ ಮಿಡಿದು ಅಮ್ಮ ಗೆಲುವಿಗಾಗಿ ದುಡಿದು ಎತ್ತಿ ಎತ್ತರಕ್ಕೆ ಬೆಳೆಸಿದೆ
ಅರಮನೆಯ ಭಿಕಾರಿ ನಾನು ಗಗನವೇ ಗಮ್ಯವೆಂದು ಗಾಳಿಯಲ್ಲಿ ನೆಲೆಸಿದೆ

ADVERTISEMENT

ರೆಕ್ಕೆ ಬಲಿತ ಹಕ್ಕಿ ಆಕಾಶ ನೆಚ್ಚಿ ಗಾಯಗೋಪುರ ಸೇರಿ ನೆಲನಿಧಾನವ ಮರೆತಿದೆ
ಕಾಳು ಬಾಳು ಕೆಳಗೇ ಎಂದ ಅಮ್ಮನನ್ನೂ ತೊರೆದೆ, ಹಾಳು ಮರವೆ ಮುಚ್ಚಿದೆ

ಕಲಿತು ಸಾಲಿ ಅರ್ಧ ಹಾಳು ಮರೆತು ಮತ್ತರ್ಧ ಹಾಳು ದಾರಿ ಕಳೆದುಹೋಗಿದೆ
ಮತ್ತೆ ಮಗುವಾಗಲು ಮೊದಲಿನಿಂದ ಬಾಳಲು ಮಣ್ಣು ಕಣ್ಸನ್ನೆ ಮಾಡಿ ಕರೆದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.