ವಿಜಯಪುರ: ವಿಧಾನಸಭಾ ಚುನಾವಣೆಗೂ ಪೂರ್ವದಲ್ಲಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಎಂ.ಬಿ. ಪಾಟೀಲ ಅವರು ತಮ್ಮ ವಾಗ್ಬಾಣಗಳನ್ನು ಪ್ರಧಾನಿ ನರೇಂದ್ರ ಮೋದಿಯತ್ತ ತಿರುಗಿಸಿಕೊಂಡಿದ್ದರು.
ವಿಜಯಪುರದಲ್ಲಿ ಈಚೆಗೆ ನಡೆದ ಎರಡು ಮೂರು ಪತ್ರಿಕಾಗೋಷ್ಠಿಗಳಲ್ಲಿ ಅವರು ಯಡಿಯೂರಪ್ಪ ಬದಲು ಮೋದಿಯನ್ನೇ ಟಾರ್ಗೆಟ್ ಮಾಡಿದ್ದರು. ಎದುರಾಳಿ ಬದಲಾದ ಬಗ್ಗೆ ಪತ್ರಕರ್ತರು ಪಾಟೀಲರ ಕಾಲೆಳೆದಾಗ, ‘ನೋಡ್ರೀ... ಕಾಲಕ್ಕೆ ತಕ್ಕಂತೆ ಬದಲಾವಣೆ ಸಹಜ. ಇದುವರೆಗೂ ಯಡಿಯೂರಪ್ಪ ನಮ್ಮ ಎದುರಾಳಿಯಾಗಿದ್ದರು. ಈಗ ನಮ್ಮ ‘ಲೆವೆಲ್ ಚೇಂಜಾಗಿದೆ’. ಬಬಲೇಶ್ವರದಲ್ಲಿ ಪ್ರಚಾರ ನಡೆಸಲಿಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಂದಿದ್ರು. ಬಿಜೆಪಿಯ ಇಬ್ಬರು ಪ್ರಮುಖರು ನನ್ನ ಕ್ಷೇತ್ರಕ್ಕೆ ಬಂದಿದ್ರು ಅಂದ್ಮೇಲೆ ನನ್ನ ಲೆವೆಲ್ ಚೇಂಜಾಗಲ್ವೇನ್ರೀ. ಅದಕ್ಕೇ ಮೋದಿಯನ್ನು ಟೀಕಿಸಿದೆ’ ಎಂದು ಪ್ರತ್ಯುತ್ತರ ನೀಡಿದರು.
ಪತ್ರಕರ್ತರೊಬ್ಬರು ತಕ್ಷಣವೇ ‘ಈಗ ಸ್ಟೇಟ್ನಿಂದ ನ್ಯಾಷನಲ್ ಲೆವೆಲ್ಗೆ ಹೋಗಿದ್ದೀರಿ, ಗ್ಲೋಬಲ್ ಲೆವೆಲ್ಗೆ ಯಾವಾಗ ಹೋಗುತ್ತೀರಿ?’ ಎಂದು ಕಿಚಾಯಿಸಿದ್ದಕ್ಕೆ, ‘ನಿಮ್ಮ ಸಹಕಾರವಿದ್ರೆ ಅದೂ ಆಗುತ್ತೆ. ಈಚೆಗೆ ನನ್ನ ಕನಸು ಮುಖ್ಯಮಂತ್ರಿಯಿಂದ, ಪ್ರಧಾನಮಂತ್ರಿಯತ್ತ ಹೊರಳಿದೆ ಕಣ್ರೀ. ಕಾಲ ಎಲ್ಲವನ್ನೂ ನಿರ್ಧರಿಸಲಿದೆ’ ಎಂದು ಜೋಶ್ನಲ್ಲೇ ಪಾಟೀಲ ಉತ್ತರಿಸಿದ್ದಕ್ಕೆ, ಗೋಷ್ಠಿಯಲ್ಲಿ ನೆರೆದಿದ್ದ ಬೆಂಬಲಿಗ ಪಡೆ ಹೌದೌದು ಎಂದು ತಲೆಯಾಡಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.