ADVERTISEMENT

ಬಿಜೆಪಿ ಸಮಾರಂಭ ನಡೆದಿದ್ದೂ ಅಲ್ಲೇ !

ನಾಗರಾಜ ಎನ್‌
Published 2 ಜೂನ್ 2018, 19:30 IST
Last Updated 2 ಜೂನ್ 2018, 19:30 IST

ದಾವಣಗೆರೆ: ‘ರಸ್ತೆ, ಉದ್ಯಾನ, ಕಟ್ಟಡ ಎಲ್ಲಿ ನೋಡಿದರೂ ಅವರದೇ ಹೆಸರಿನ ಬೋರ್ಡು! ಬಿಜೆಪಿಯವರು ಏನೂ ಕೆಲಸ ಮಾಡಿಲ್ಲವೇ? ಜಿಲ್ಲೆಯ ಅಭಿವೃದ್ಧಿಗೆ ನಮ್ಮವರು ಮಾಡಿರುವ ಕೆಲಸಗಳನ್ನೂ ಹೇಳಿ ಸಾರ್‌’ ಎಂದು ಕಾರ್ಯಕರ್ತನೊಬ್ಬ ಕೇಳಿದ. ಬೋರ್ಡ್‌ ಹಾಕಿಕೊಂಡವರಿಗೆ ಏನಾಗುತ್ತದೆ ಎಂದು ಜನರೇ ತಿಳಿಸಿದ್ದಾರಲ್ಲಯ್ಯ ಎಂದು ಆತನಿಗೆ ಉತ್ತರಿಸಿದೆ. ಬೋರ್ಡ್‌ ಹಾಕಿಕೊಂಡವರು ಮನೆಯಲ್ಲಿ ಕುಳಿತಿಲ್ಲವೇ?...’

ಹೀಗೆ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಹೆಸರು ಹೇಳದೇ ಛೇಡಿಸಿದರು.

‘ಕೆಲವರಿಗೆ ತಮ್ಮ ಹೆಸರಿನ ಬೋರ್ಡ್‌ ಹಾಕಿಕೊಳ್ಳುವುದೇ ಕೆಲಸ. ದಾವಣಗೆರೆಯ ರಿಂಗ್‌ ರಸ್ತೆಗೆ ಹಣ ಬಿಡುಗಡೆ ಆಗಿದ್ದು ಬಿಜೆಪಿ ಕಾಲದಲ್ಲಿ. ಕಾಮಗಾರಿ ನಡೆದಿದ್ದೂ ನಮ್ಮ ಅವಧಿಯಲ್ಲೇ. ಆದರೂ ಅವರು ಹೆಸರು ಹಾಕಿಕೊಳ್ಳುತ್ತಾರೆ; ಏನು ಮಾಡುವುದು’ ಎಂದೂ ಸಿದ್ದೇಶ್ವರ ಕಿಡಿಕಾರಿದರು.

ADVERTISEMENT

ನಂತರ ಮಾತಿಗಿಳಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌, ‘ಬದುಕಿರುವವರ ಹೆಸರನ್ನು ಸರ್ಕಾರಿ ಕಟ್ಟಡ, ಉದ್ಯಾನ, ರಸ್ತೆಗಳಿಗೆ ಇಡಬಾರದು ಎಂದು ನ್ಯಾಯಾಲಯವೇ ನಿರ್ದೇಶನ ನೀಡಿದೆ. ಕಾನೂನಿನ ಈ ಅವಕಾಶವನ್ನು ಜಿಲ್ಲೆಯಲ್ಲಿ ಗೆದ್ದು ಬಂದಿರುವ ಬಿಜೆಪಿ ಶಾಸಕರು ಬಳಸಿಕೊಳ್ಳಬೇಕು. ಸರ್ಕಾರಿ ಕಟ್ಟಡಗಳ ಮೇಲೆ ಬದುಕಿರುವವರ ಹೆಸರಿನ ಬೋರ್ಡ್‌ ಹಾಕಿಕೊಳ್ಳುವುದಕ್ಕೆ ಕಡಿವಾಣ ಹಾಕಬೇಕು’ ಎಂದು ಭಾವೋದ್ವೇಗದಿಂದ ಆಗ್ರಹಿಸಿದರು.

ನಾಯಕರ ಆಕ್ರೋಶದ ನುಡಿಗಳ ನಡುವೆಯೇ ಮಾತನಾಡಿಕೊಂಡ ಬಿಜೆಪಿಯ ಕೆಲ ಕಾರ್ಯಕರ್ತರು, ‘ಅಯ್ಯೋ ಈ ಅಭಿನಂದನಾ ಸಮಾರಂಭ ನಡೆಯುತ್ತಿರುವದೇ ‘ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪ’ದಲ್ಲಿ ಎಂದು ಗೊಳ್ಳೆಂದು ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.