ಶಿರಸಿ: ‘ಏನಾದರೂ ಮಾಡಿ ಸಾರಾಯಿ ಮಾರಾಟ ಮಾಡುವುದನ್ನು ಮಾತ್ರ ಕಡಿಮೆ ಮಾಡಿಕೊಡಿ. ಇದು ನಮ್ಮ ಭಾಗದ ಜನರ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಬೇಡಿಕೆಯಾಗಿದೆ’ ಎಂದು ಶಿರಸಿ- ಸಿದ್ದಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಷಣದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಂತಿಸಿದಾಗ, ‘ರಾಜ್ಯದಲ್ಲಿ ಈ ಹಿಂದೆಯೇ ಸಾರಾಯಿ ನಿಷೇಧ ಆಗಿದೆ’ ಎಂದು ಸಿದ್ದರಾಮಯ್ಯ ನಕ್ಕರು.
‘ಕ್ಷಮಿಸಿ, ಸಾರಾಯಿ ನಿಷೇಧವಾಗಿದೆ ನಿಜ...ಆದರೆ ಹೆಂಡ, ಅದೇ ಲಿಕ್ಕರ್ ಅದಕ್ಕೆ ಕನ್ನಡದಲ್ಲಿ ಏನೆನ್ನಬೇಕೋ ಗೊತ್ತಿಲ್ಲ. ನನಗೆ ಅವೆಲ್ಲ ಗೊತ್ತಿಲ್ಲದಿರುವುದರಿಂದ ಹೆಸರಿನ ಬಗ್ಗೆ ಗೊಂದಲ’ ಎಂದು ಸಮರ್ಥಿಸಿಕೊಂಡ ಕಾಗೇರಿ, ‘ಮದ್ಯ’ ಪದಕ್ಕಾಗಿ ತಡಕಾಡಿದರು. ಇದನ್ನು ಕಂಡ ಮುಖ್ಯಮಂತ್ರಿ ‘ಅದು ಭಾರತೀಯ ಮದ್ಯ’ ಎನ್ನುತ್ತ ಕಿರುನಗೆ ಬೀರಿದರು.
ಅಂತೂ ಕೊನೆಯಲ್ಲಿ ‘ಮದ್ಯ’ ಪದವನ್ನು ಬಳಸಿದ ಕಾಗೇರಿ, ಅದರ ಅಕ್ರಮ ಮಾರಾಟ ತಡೆಗಟ್ಟಬೇಕು ಎಂದು ಒತ್ತಾಯಿಸಿದಾಗ, ಶಿರಸಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನಾ ಸಭೆಯಲ್ಲಿ ಚಪ್ಪಾಳೆಯ ಸದ್ದು ಮೊಳಗಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.