ADVERTISEMENT

ಮೈಸೂರಿನಲ್ಲಿ ಅಂದು ನಡೆದ ದುರಂತದ ನಂತರ...

ಸುಭಾಸ.ಎಸ್.ಮಂಗಳೂರ
Published 1 ಫೆಬ್ರುವರಿ 2013, 19:59 IST
Last Updated 1 ಫೆಬ್ರುವರಿ 2013, 19:59 IST

ಅದು 2009ರ ಫೆಬ್ರುವರಿ 16. ಹಿಂದಿನ ದಿನವಷ್ಟೇ ಸಂಬಂಧಿಕರೊಬ್ಬರಿಗೆ ರಕ್ತದಾನ ಮಾಡಿ ಬಂದಿದ್ದ ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆಯ (ಕೆಎಸ್‌ಆರ್‌ಪಿ) ಕಾನ್‌ಸ್ಟೆಬಲ್ ಒಬ್ಬರು ವಿಶ್ರಾಂತಿ ಬಯಸಿ  ಇನ್ಸ್‌ಪೆಕ್ಟರ್‌ಗೆ ರಜೆ ಕೇಳಿದರು.

`ಕೆಲಸದ ಒತ್ತಡ ಹೆಚ್ಚಾಗಿದೆ, ರಜೆ ಕೊಡಲು ಆಗುವುದಿಲ್ಲ' ಎಂದು ಇನ್ಸ್‌ಪೆಕ್ಟರ್ ಸಂಯಮದಿಂದಲೇ ಹೇಳಿದರು. ಇದರಿಂದ ಸಿಟ್ಟಿಗೆದ್ದ ಕಾನ್‌ಸ್ಟೆಬಲ್ ತಕ್ಷಣವೇ ಅವರನ್ನು ಗುಂಡಿಕ್ಕಿ ಕೊಂದ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ.

ಈ ಘಟನೆ ನಡೆದಿದ್ದು ಮೈಸೂರಿನಲ್ಲಿ. ಕೆಎಸ್‌ಆರ್‌ಪಿ 5ನೇ ಪಡೆಯ ಕಾನ್‌ಸ್ಟೆಬಲ್ ಕೆ.ಎಸ್.ಶಿವಕುಮಾರ್ (33) ಅವರು ಇನ್ಸ್‌ಪೆಕ್ಟರ್ ಎನ್.ನಾಗೇಗೌಡ (52) ಅವರ ಮೇಲೆ ಗುಂಡಿನ ಮಳೆಗರೆದಿದ್ದರು.

ಆ ಬಳಿಕ ಏನೆಲ್ಲ ಆಗಿದೆ ಎಂದು ನೋಡಿದರೆ ಅಂತೆ-ಕಂತೆಗಳ ನಡುವೆಯೇ ಎರಡೂ ಕುಟುಂಬಗಳಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಇಲಾಖೆ ತಲುಪಿಸಿದೆ. ಮೃತ ಇಬ್ಬರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲಾಗಿದೆ.

ಮೃತ ನಾಗೇಗೌಡ ಅವರಿಗೆ ಪತ್ನಿ ಇರಲಿಲ್ಲ. ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಮಗ ಎನ್.ಸಂದೀಪ್ ಬಿ.ಇ ಓದಿದ್ದು, ಆತನಿಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ (ಎಫ್.ಡಿ.ಸಿ) ನೌಕರಿ ನೀಡಲಾಗಿದೆ.
ಕಾನ್‌ಸ್ಟೆಬಲ್ ಕೆ.ಎಸ್.ಶಿವಕುಮಾರ್ ಅವರ ಪತ್ನಿಗೆ ಮಂಡ್ಯದಲ್ಲಿ ದ್ವಿತೀಯ ದರ್ಜೆ ಸಹಾಯಕಿ (ಎಸ್.ಡಿ.ಸಿ) ಹುದ್ದೆ ನೀಡಲಾಗಿದೆ.

`ಸಾಮಾನ್ಯವಾಗಿ ಕಾನ್‌ಸ್ಟೆಬಲ್ ಉದ್ಯೋಗ ಬಯಸಿ ಬರುವವರು ಬಡ ಕುಟುಂಬದವರೇ ಹೆಚ್ಚಾಗಿರುತ್ತಾರೆ. ಆದರೆ, ಬಹುತೇಕ ಸಂದರ್ಭಗಳಲ್ಲಿ ಕೆಲಸಕ್ಕೆ ಸೇರುವಾಗಿನ ಮನೋಭಾವ, ಕೆಲಸ ದೊರೆತ ಬಳಿಕ ಇರುವುದಿಲ್ಲ. ಇಂತಹ ಘಟನೆಗಳು ನಡೆಯಲು ಸಮಾಜ, ವ್ಯವಸ್ಥೆಯೂ ಕಾರಣ.

ಪೊಲೀಸ್ ಇಲಾಖೆ ಕ್ರೂರಿ ಅಲ್ಲ, ಮಾನವೀಯತೆ ಇರುವ ಇಲಾಖೆ ಎಂಬುದನ್ನು ಸಮಾಜ, ಸಿಬ್ಬಂದಿ ಅರಿತುಕೊಳ್ಳಬೇಕು. ಯಾರದೋ ತಪ್ಪಿಗೆ, ಯಾರದೋ ಮೇಲಿನ ಕೋಪದಿಂದ ಕರ್ತವ್ಯದಲ್ಲಿದ್ದ ಇನ್ಸ್‌ಪೆಕ್ಟರ್ ಮೇಲೆ ಗುಂಡಿನ ದಾಳಿ ನಡೆಸಿರುವುದು ದುರದೃಷ್ಟಕರ. ಇಂತಹ ಘಟನೆಗಳು ನಡೆಯಬಾರದು' ಎಂದು ಕೆಎಸ್‌ಆರ್‌ಪಿ 5ನೇ ಪಡೆಯ ಕಮಾಂಡೆಂಟ್ ಕೃಷ್ಣಪ್ಪ ಹೇಳುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.