ADVERTISEMENT

ರೇಣುಕಾಚಾರ್ಯ ಮಹಾತ್ಮೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ದಾವಣಗೆರೆಯಲ್ಲಿ ಮತದಾರರಿಗೆ ಆಮಿಷವೊಡ್ಡುವ ಕಸರತ್ತಿನಲ್ಲಿ ರಾಜ್ಯದ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಮುಂಚೂಣಿಯಲ್ಲಿದ್ದಾರೆ. ಈ ಬಾರಿ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲೇ ಬಿಜೆಪಿ ಮಹಿಳಾ ಕಾರ್ಯಕರ್ತೆಯರ ಸಮಾವೇಶ ಮಾಡಿದ ಸಚಿವರು, ಮರುದಿನ 50 ಸಾವಿರ ಮಹಿಳೆಯರಿಗೆ  `ಬಾಗಿನ~ದ ನೆಪದಲ್ಲಿ ಸೀರೆ ವಿತರಿಸಿದ್ದಾರೆ.

ಆ ರೀತಿ ವಿತರಿಸುವ ಕ್ರಮವನ್ನು ಖುದ್ದು ಸಚಿವರೇ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದು ವಿಶೇಷ. ದಸರಾ ಮಹೋತ್ಸವ, ಸ್ತ್ರೀಶಕ್ತಿ ಸಂಘ, ಯುವಕ ಸಂಘಗಳ ಕಾರ್ಯಕ್ರಮಗಳಿಗೆ ದೇಣಿಗೆ ನೀಡಿ, ತಾವೇ ಅತಿಥಿಗಳಾಗಿ ಪಾಲ್ಗೊಳ್ಳುವ ಮೂಲಕ ಇತರ ಜನಪ್ರತಿನಿಧಿಗಳು, ತಮ್ಮ ಪಕ್ಷಗಳ ಸಾಧನೆಗಳನ್ನು ಬಣ್ಣಿಸತೊಡಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಟಿಕೆಟ್ ಆಕಾಂಕ್ಷಿಗಳು  ನಿರಂತರವಾಗಿ  ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇದರ ಜತೆಗೆ ಉತ್ಸವಗಳಿಗೆ ದೇಣಿಗೆ ಮತ್ತು ಸ್ತ್ರೀ ಸಂಘಗಳಿಗೆ ಧನಸಹಾಯ ನಡೆದೇ ಇದೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ರಘುಮೂರ್ತಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕೆಂದು ಬೆಂಬಲಿಗರು ದೇವಿಗೆ ಪ್ರಾರ್ಥಿಸಿ ಪಾದಯಾತ್ರೆ ನಡೆಸಿದರು. ಭೂಸೇನಾ ನಿಗಮದಲ್ಲಿ ಎಂಜಿನಿಯರ್ ಆಗಿದ್ದ ರಘುಮೂರ್ತಿ ಸ್ವಯಂನಿವೃತ್ತಿ ಪಡೆದು ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ. 

ಇದೇ ಕ್ಷೇತ್ರದಿಂದ ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ಎಲ್.ನಾಗರಾಜ್ ನಿವೃತ್ತ ಶಿಕ್ಷಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಹಳ್ಳಿಗಳಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
 
ಬೆಂಗಳೂರಿನ ಬಿಡಿಎನಲ್ಲಿದ್ದ ಉದ್ಯೋಗಕ್ಕೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಕಳೆದ ಮೂರ‌್ನಾಲ್ಕು ವರ್ಷಗಳಿಂದ ಇಂತಹ ಪ್ರಹಸನಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.