ADVERTISEMENT

ಹೋರಾಟದ ಮತ್ತೊಂದು ಮಜಲು

ರಾಜಕೀಯದಲ್ಲಿ ಹೊಸ ದನಿ

ನೀನಾ ನಾಯಕ್‌
Published 4 ಏಪ್ರಿಲ್ 2014, 19:30 IST
Last Updated 4 ಏಪ್ರಿಲ್ 2014, 19:30 IST
ಹೋರಾಟದ ಮತ್ತೊಂದು ಮಜಲು
ಹೋರಾಟದ ಮತ್ತೊಂದು ಮಜಲು   

ರಾಜಕೀಯ ಎಂದರೇ ಕೊಳಕು. ಸಭ್ಯ ವ್ಯಕ್ತಿಗಳಿಗೆ ರಾಜಕೀಯ ಸಲ್ಲದು ಎಂಬಂತಹ ಸಿನಿಕತನದ ಮನಸ್ಥಿತಿ ಸರ್ವವ್ಯಾಪಿ. ಇಂತಹ ಸನ್ನಿವೇಶದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಜನಪರ ಹೋರಾಟಗಳ ಧ್ವನಿಗಳಾಗಿರುವ ಅನೇಕ ವ್ಯಕ್ತಿಗಳು ಈ ಬಾರಿ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ರಾಜಕೀಯದ ಹೊಸ ಧ್ವನಿಗಳಾಗಲು ಹೊರಟಿರುವುದು ವಿಶೇಷ. ಅವರ ಹೊಸ ಆಶಯ, ರಾಜಕಾರಣದಲ್ಲೊಂದು ಹೊಸ ಮಾರ್ಗ ತೆರೆಯಬಲ್ಲುದೆ?

ಹೌ‌ದು, ರಾಜಕೀಯ ಪ್ರವೇಶ ನನ್ನ ಹೊಸ ಅವತಾರ. ‌ಆದರೆ, ಹೋರಾಟಗಾರ್ತಿಯ ಪಾತ್ರ­ವನ್ನೇನೂ ನಾನು ಬಿಟ್ಟುಕೊಟ್ಟಿಲ್ಲ. ಈ ಹೊಸ ಅವ­ತಾರ­ವನ್ನು ಹೋರಾಟದ ಮತ್ತೊಂದು ಮಜಲು ಎನ್ನಲು ಅಡ್ಡಿಯಿಲ್ಲ. ಮಿತಿಮೀರಿದ ಭ್ರಷ್ಟಾ­ಚಾರ, ಹೆಚ್ಚಿರುವ ಸ್ವಜನ ಪಕ್ಷಪಾತ, ಗೊತ್ತು–ಗುರಿ ಇಲ್ಲದ ಯೋಜನೆ, ಅಸ್ಪಷ್ಟ ನೀತಿ ನಿರೂಪಣೆ, ಹೆಜ್ಜೆ–ಹೆಜ್ಜೆಗೂ ಮುಗ್ಗರಿಸುವ ಆಡಳಿತ... ಅಯ್ಯೋ ಇಂತಹ ಸಾಲು–ಸಾಲು ಗೋಳು ನೋಡಿ ಸಾಕಾ­ಗಿದೆ; ತಲೆ ಚಿಟ್ಟು ಹಿಡಿದಿದೆ. ಸೈರಣೆ ಶಕ್ತಿ ಕುಂದಿಹೋಗಿದ್ದು ನಮಗೆಲ್ಲ ಬದ­ಲಾವಣೆ ಅತ್ಯಗತ್ಯವಾಗಿ ಬೇಕಾಗಿದೆ. ಬಯಸಿದ ಬದಲಾವಣೆ ತರಲು ನಾವೂ ಈ ರಾಜಕೀಯ ಆಂದೋಲನದ ಭಾಗವಾಗಬೇಕಿದೆ. ನಾನು ಚುನಾವಣಾ ಕಣಕ್ಕೆ ಧುಮುಕಲು ಇದೇ ಕಾರಣ.

ಕಳೆದ ಮೂರೂವರೆ ದಶಕಗಳಿಂದ ಮಕ್ಕಳ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದೇನೆ. ಇಷ್ಟೊಂದು ಸುದೀರ್ಘ ಕಾಲದ ಹೋರಾ­ಟದ ನಡುವೆಯೂ ಸಮಸ್ಯೆಗಳು ಹಾಗೇ ಉಳಿದಿವೆ. ಮಕ್ಕಳ ಅಭಿವೃದ್ಧಿ ಸೂಚ್ಯಂಕ ಪಾತಾಳ ಕಂಡಿದೆ. ಬಾಲ್ಯ ವಿವಾಹ ನಿಂತಿಲ್ಲ, ಶಿಶು ಮರಣ ತಗ್ಗಿಲ್ಲ, ಭ್ರೂಣಹತ್ಯೆಗೆ ತೆರೆ ಬಿದ್ದಿಲ್ಲ, ಪೌಷ್ಟಿಕಾಂಶ ಕೊರತೆಯ ಪಿಡುಗು ಬಿಟ್ಟಿಲ್ಲ, ಶಿಕ್ಷಣದ ಕಗ್ಗಂಟುಗಳನ್ನೂ ಬಿಡಿಸಲಾಗಿಲ್ಲ.

‘ಮಕ್ಕಳೇ ದೇಶದ ಆಸ್ತಿ’ ಎನ್ನುವುದು ಸವಕಲು ಹೇಳಿಕೆ­ಯಾಗಿ­ದೆಯೇ ಹೊರತು ಮಕ್ಕಳ ಅಭಿವೃದ್ಧಿಗೂ, ರಾಜಕೀಯ ಪಕ್ಷಗಳಿಗೂ ಸಂಬಂಧವೇ ಇಲ್ಲವಾಗಿದೆ. ರಾಜಕೀಯ ವ್ಯಕ್ತಿಯಾಗಿ ನಾನು ಮಾಡು­ತ್ತಿರುವ ಪೊಳ್ಳು ಆರೋಪವಿದು ಎಂಬ ಭಾವನೆಯನ್ನು ಯಾರೂ ತಂದು­ಕೊಳ್ಳಬಾರದು. ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷೆ­ಯಾಗಿ, ಭಾರತೀಯ ಮಕ್ಕಳ ಕಲ್ಯಾಣ ಪರಿಷತ್ತಿನ ಉಪಾಧ್ಯಕ್ಷೆ­ಯಾಗಿ ನಾನು ಪಡೆದಿರುವ ಅನುಭವದ ಆಧಾರದ ಮೇಲೆ ಈ ಮಾತು ಹೇಳುತ್ತಿದ್ದೇನೆ.

ದೇಶದ ಮುಂಚೂಣಿ ರಾಜಕೀಯ ಪಕ್ಷಗಳಿಗೆ ಸಮಸ್ಯೆಗಳು ಬಗೆಹರಿ­ಯುವುದು ಬೇಕಿಲ್ಲ. ಅಸ್ಪಷ್ಟವಾದ ನೀತಿಗಳು, ಫಲಾನುಭವಿಗಳನ್ನು ತಲು­ಪದ ಯೋಜನೆಗಳೇ ಇದಕ್ಕೆ ಕಾರಣ. ಆಯೋಗಗಳಿಗೆ ವಿಷಯ ತಜ್ಞರನ್ನು ನೇಮಕ ಮಾಡಿದರೆ ಅವರು ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಯತ್ನಿಸುತ್ತಾರೆ. ಆದರೆ, ಈಗಿನ ಸನ್ನಿವೇಶದಲ್ಲಿ ಆಯೋಗ­ಗಳೆಲ್ಲ ರಾಜಕೀಯ ನಿರಾಶ್ರಿತರ ತಾಣಗಳಾಗಿವೆ. ಇಂತಹ ವ್ಯಕ್ತಿಗಳು ಸದಸ್ಯರಾದರೆ ಏನು ಪ್ರಯೋಜನ? ಆಯೋಗದ ಹೆಸರಿ­ನಲ್ಲಿ ‘ಅಧ್ಯಯನ ಪ್ರವಾಸ’ ಮಾಡುವುದು, ಸಂಬಳ, ಸಾರಿಗೆ ಭತ್ಯೆ ಪಡೆ­ಯುವುದು ಇಷ್ಟೇ ಅವರ ಕೆಲಸ. ಯೋಜನೆಗಳ ನಿರ್ವಹಣಾ ಪ್ರಾಧಿ­ಕಾರಗಳೆಲ್ಲ ಇಂತಹ ಏಟುಗಳಿಂದ ಜಖಂಗೊಂಡು ಮೂಲೆ ಸೇರಿರುವ ಪರಿ ಇದು.

ದೇಶದ ಅಭಿವೃದ್ಧಿ ನಕ್ಷೆ ಹೇಗಿರಬೇಕು ಎಂಬ ಕಲ್ಪನೆಯೇ ಈಗಿನ ಸಂಸದ­ರಿಗಿಲ್ಲ. ಇಲ್ಲದಿದ್ದರೆ ಸಿಕ್ಕ ಐದು ವರ್ಷಗಳ ಅವಧಿಯನ್ನು ಪ್ರಗತಿಗೆ ಪೂರಕವಾಗಿ ಉಪಯೋಗ ಮಾಡುತ್ತಿದ್ದರು. ಮಕ್ಕಳ ಸಮಸ್ಯೆ­ಗಳ ಕುರಿತಂತೆ ಸದನದಲ್ಲಿ ಯಾರೂ ಗಂಭೀರವಾದ ಪ್ರಶ್ನೆಗಳನ್ನೇ ಕೇಳು­ವುದಿಲ್ಲ. ಸಮಸ್ಯೆ ಆಳಕ್ಕೆ ಇಳಿದು ನೋಡುವಂತಹ, ತಲಸ್ಪರ್ಶಿ ನೋಟ ಬೀರುವಂತಹ, ಅದಕ್ಕೊಂದು ಶಾಶ್ವತ ಪರಿಹಾರ ಒದಗಿ­ಸು­ವಂತಹ ಪ್ರಯತ್ನಗಳು ನಡೆದ ಉದಾಹರಣೆಗಳೇ ಇಲ್ಲ.

ಸಾಮಾಜಿಕ ಸಮಸ್ಯೆ ಕುರಿತಂತೆ ಆಳವಾಗಿ ಅಧ್ಯಯನ ನಡೆಸಿ, ಅದಕ್ಕೆ ಪರಿಹಾರ ಒದಗಿಸಲು ಕಾನೂನು ಸಮರವನ್ನೂ ನಡೆಸಿ, ಅಪಾರ ಅನುಭವ ಗಳಿಸಿದ ನಮ್ಮಂಥವರೇ ಅಲ್ಲವೆ ಸಂಸತ್‌ಗೆ ಹೋಗ­ಬೇಕಿರುವುದು. ಹೋರಾಟದ ದನಿ ಸಂಸತ್ತಿನ ಬಲಾಢ್ಯ ಗೋಡೆಗಳನ್ನು ದಾಟಿ­ಕೊಂಡು ಒಳಗೆ ಕುಳಿತವರನ್ನು ತಲುಪುತ್ತಿಲ್ಲ. ಹೀಗಾಗಿ ಒಳಗೆ ಕುಳಿತು ನಿರ್ಣಯ ಕೈಗೊಳ್ಳುವವರು ನಾವೇ ಆಗಬೇಕಿದೆ.

ರಾಜಕೀಯ ಶುದ್ಧೀಕರಣಕ್ಕೆ ಮುಂದಾಗಿ ತತ್ವಾದರ್ಶದ ದೀಪ ಹಿಡಿದು ಹೊರಟಿರುವ ಆಮ್‌ ಆದ್ಮಿ ಪಕ್ಷ ಇದೇ ಕಾರಣದಿಂದ ನನ್ನ ಗಮನ­ಸೆಳೆದಿದೆ. ಎಎಪಿ ರಾಜಕೀಯವಾಗಿ ಮಗು ಎಂಬ ಕುಹಕ ಕೇಳಿ­ಬಂದಿದೆ. ಅದು ಮಗುವಾಗಿರುವ ಕಾರಣದಿಂದಲೇ ಮುಗ್ಧವಾಗಿದೆ. ವಯಸ್ಸಾದ ಉಳಿದ ಪಕ್ಷಗಳ ಮುಖಕ್ಕೆ ಕೆಸರು ಮೆತ್ತಿದರೆ, ಎಎಪಿ ಮುದ್ದು–ಮುದ್ದಾಗಿ ಕಂಗೊಳಿಸುತ್ತಿದೆ. ಇದುವರೆಗೆ ಅನುಭವಿಸಿದ ವಂಚನೆ­ಯಿಂದ ಒಳ–ಒಳಗೆ ಕುದಿದು ಹೋಗಿರುವ ಮಧ್ಯಮ ವರ್ಗದ ಅಪಾರ ಮತದಾರರು ಆ ಮಗುವನ್ನು ಎತ್ತಿಕೊಳ್ಳಲಿದ್ದಾರೆ; ಅಪ್ಪಿ­ಕೊಳ್ಳಲಿದ್ದಾರೆ. ಉಳಿದವರಿಗೆ ಜಾತಿಬಲ, ತೋಳ್ಬಲ, ಹಣ­ಬಲ­ಗಳಿದ್ದರೆ ನಮಗೆ ಜನರ ಪ್ರೀತಿಯೇ ಶ್ರೀರಕ್ಷೆ.

(ಬೆಂಗಳೂರು ದಕ್ಷಿಣ ಕ್ಷೇತ್ರದ ಎಎಪಿ ಅಭ್ಯರ್ಥಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT