ಶಿವಕುಮಾರ ಅವರು ಹೇಳುವಂತೆ ಕೀಳು ಜಾತಿಗಳು ಸೃಷ್ಟಿಯಾದುದು ಬಹಿಷ್ಕೃತರಾದ ಬೌದ್ಧರಿಂದ. ಇದು ನಿಜವೇ ಆಗಿದ್ದರೆ ಬೌದ್ಧರೇಕೆ ಅಲ್ಲಿಯೇ ನೆಲಸುತ್ತಿದ್ದರು. ಹಿಂದೂಗಳು ಬುದ್ಧನನ್ನು ವಿಷ್ಣುವಿನ ಹನ್ನೊಂದನೇ ಅವತಾರವೆಂದು ಪೂಜಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ಬೌದ್ಧರು ಬಹಿಷ್ಕೃತರಾಗಲು ಸಾಧ್ಯವೇ? ಅಂಬೇಡ್ಕರರು ಆಳವಾದ ಅಧ್ಯಯನ ಕೈಗೊಂಡು ನೀಡಿರುವ ಹೇಳಿಕೆ ನಿಜವಾಗಿಯೇ ಇರಬಹುದು. ಅವರು ಹೇಳಿದ ಹಾಗೇ ಬೌದ್ಧರು ಅಸ್ಪೃಶ್ಯರಾಗಿಬಿಟ್ಟಿದ್ದರೆ ಅಶೋಕನಂಥ ರಾಜ ಬೌದ್ಧ ಧರ್ಮ ಸ್ವೀಕರಿಸುವುದು ಹೇಗೆ ಸಾಧ್ಯವಿತ್ತು?
ಜಾತಿ ಪದ್ಧತಿ ಹುಟ್ಟಿದ್ದು ಜನರು ಮಾಡುವ ಕಾಯಕದಿಂದ. ಬಹುಸಂಖ್ಯಾತರು ಇರುವ ಸ್ಥಳಗಳಿಗೆ ಅಲ್ಪಸಂಖ್ಯಾತರು ಬಂದುದ್ದರಿಂದ ಅವರನ್ನು ಒಪ್ಪದ ಸಮಾಜ ಅವರಿಗೆ ಬಹಿಷ್ಕಾರ ಹಾಕಿರಬಹುದು. ಆದರೆ ಅದುವೇ ಒಂದು ಜಾತಿಪದ್ಧತಿ ಆಯಿತು ಎನ್ನಲು ಸಾಧ್ಯವಿಲ್ಲ.
ಇನ್ನು ಜಾತಿ ಪದ್ಧತಿ ಈ ಕಾಲದಲ್ಲಿ ಮುಂದುವರಿಯುತ್ತಿರುವುದಕ್ಕೆ ಸರ್ಕಾರವೇ ಕಾರಣ. ಸರ್ಕಾರವೇ ಇದರ ನಿರ್ಮೂಲನೆಗೆ ಮುಂದಾಗಬೇಕು. ಸರ್ಕಾರವೇ ಮೀಸಲಾತಿ, ಒಳಮೀಸಲಾತಿ ನೀಡುತ್ತಿದ್ದರೆ ಅದು ಹೇಗೆ ಜಾತಿಪದ್ಧತಿ ನಿರ್ಮೂಲನೆ ಆದೀತು.
ಮಗುವನ್ನು ಶಾಲೆಗೆ ಸೇರಿಸುವುದರಿಂದ ಆರಂಭಿಸಿ, ನೌಕರಿ, ವೃದ್ಧಾಪ್ಯವೇತನ ಹಾಗೂ ಮರಣ ಪ್ರಮಾಣ ಪತ್ರದವರೆಗೂ ಅವನ ಜಾತಿಯನ್ನು ಹೇಳಲೇಬೇಕಾಗಿದೆ.
ಸರ್ಕಾರವೇ ಈ ಜಾತಿಯೆಂಬ ಪದ ತೆಗೆದು ಎಲ್ಲರೂ `ಹಿಂದೂ'ಗಳೆಂದು ತಿದ್ದುಪಡಿ ತಂದು ಅದನ್ನು ಮೀರಿ ಹೋದವರಿಗೆ ಕಠಿಣ ಶಿಕ್ಷೆ ವಿಧಿಸಬಹುದಲ್ಲವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.