ADVERTISEMENT

ನಾಲೆ ನಡೆದ ಹಾದಿ...

ಗಣಂಗೂರು ನಂಜೇಗೌಡ
Published 8 ಜೂನ್ 2015, 19:30 IST
Last Updated 8 ಜೂನ್ 2015, 19:30 IST
ನಾಲೆ ನಡೆದ ಹಾದಿ...
ನಾಲೆ ನಡೆದ ಹಾದಿ...   

ಸುಮಾರು 1.20 ಲಕ್ಷ ಎಕರೆಯಷ್ಟು ಕೃಷಿ ಭೂಮಿಗೆ ನೀರೊದಗಿಸುವ ಅಪೂರ್ವ ನಾಲೆಯೇ ವಿಶ್ವೇಶ್ವರಯ್ಯ (ಆರ್ವಿನ್‌) ನಾಲೆ. ಎರಡೂವರೆ ಕಿ.ಮೀ. ಉದ್ದದ ಸುರಂಗದಲ್ಲಿ ‘ಗುಪ್ತಗಾಮಿನಿ’ಯಂತೆ ರೋಚಕವಾಗಿ ಹರಿಯುವ ಇದಕ್ಕೆ, ಏಷ್ಯಾ ಖಂಡದ ಅತ್ಯಂತ ಉದ್ದದ ಸುರಂಗ ಹೊಂದಿರುವ ನೀರಾವರಿ ಯೋಜನೆ ಎಂಬ ಅಗ್ಗಳಿಕೆ.

ನಾಲ್ವಡಿ ಕೃಷ್ಣರಾಜ ಒಡೆಯರ್‌ (1895–1940) ಕಾಲದಲ್ಲಿ ನಿರ್ಮಾಣವಾದ ಕೃಷ್ಣರಾಜ ಸಾಗರ ಜಲಾಶಯದಿಂದ ನೀರನ್ನು ಕೃಷಿ ಭೂಮಿಗೆ ಹರಿಸಲು ತೋಡಿದ ಮೂರು ನಾಲೆಗಳಲ್ಲಿ ವಿಶ್ವೇಶ್ವರಯ್ಯ ನಾಲೆ ದೊಡ್ಡ ಯೋಜನೆ. ನಾಲೆಯ ಕಾಮಗಾರಿ ಆರಂಭವಾದ 5ನೇ ವರ್ಷದಿಂದ ರೈತರು ಸಮೃದ್ಧ ಫಸಲು ತೆಗೆದಿದ್ದಾರೆ.

ಜಲಾಶಯದ ಉತ್ತರ ಭಾಗದಲ್ಲಿ, ನದಿ ಪಾತ್ರದಿಂದ 60 ಅಡಿ ಎತ್ತರದಲ್ಲಿ ಕವಾಟಗಳನ್ನು ಇರಿಸಿ ಈ ನಾಲೆಗೆ ನೀರು ಧುಮುಕುವಂತೆ ಮಾಡಲಾಗಿದೆ. 6 ಅಡಿ ಅಗಲ, 12 ಅಡಿ ಎತ್ತರ ಇರುವ 3 ತೂಬುಗಳ ಮೂಲಕ ಜಲಾಶಯದ ನೀರು ನಾಲೆಗೆ ಹರಿಯುತ್ತದೆ. ಈ ನಾಲೆ ಮೊದಲ 26 ಮೈಲು ದೂರ ಹಳ್ಳ, ತಿಟ್ಟು ದಾಟಿ ಮಂಡ್ಯದ ಹುಲಿಕೆರೆಯಲ್ಲಿ ಸುರಂಗ ಪ್ರವೇಶಿಸುತ್ತದೆ.

ಈ ನಾಲೆಯ ಯೋಜನೆ ರೂಪಿಸಿದ ದಿವಾನ್‌ ಬಹದ್ದೂರು ರಾಜ ಸೇವಾಸಕ್ತ ಕೆ.ಆರ್‌. ಶೇಷಾಚಾರ್ಯ ಅವರು ಈ ಸುರಂಗ ಯೋಜನೆಯನ್ನು ರೂಪಿಸಿದ್ದಾರೆ. ನಾಲೆಯ 26ನೇ ಮೈಲಿಯಲ್ಲಿ ಆರಂಭವಾಗುವ ಈ ಸುರಂಗ 28.5ನೇ ಮೈಲಿಯವರೆಗೆ ಸಾಗಿ ರಭಸದಿಂದ ಹೊರಗೆ ಬರುತ್ತದೆ. ಅದಕ್ಕೂ ಮುನ್ನ ತಗ್ಗು ಪ್ರದೇಶದಿಂದ ನೀರನ್ನು ಈ ದಡಕ್ಕೆ ತರಲು ಕುರಹಟ್ಟಿ ಎಂಬ ಹಳ್ಳಿಯ ಬಳಿ ಒಂದು ಫರ್ಲಾಂಗ್‌ನಷ್ಟು ಮೇಲ್ಗಾಲುವೆ (ಅಕ್ವಡಕ್‌) ನಿರ್ಮಿಸಲಾಗಿದೆ. ಈ ‘ನೆಲದೊಳಗಿನ ನಾಲೆ’ಯಲ್ಲಿ 2,200 ಕ್ಯೂಸೆಕ್‌ನಷ್ಟು ನೀರು ರಭಸವಾಗಿ ಹರಿದು ಮುನ್ನಡೆಯುತ್ತದೆ.

1927ರಲ್ಲಿ ನಾಲೆ ತೋಡಲು ಭೂಮಿ ಪೂಜೆ ನೆರವೇರಿ  1932ರಲ್ಲಿ ಅದು ಮುಕ್ತಾಯ ಕಂಡಿದೆ.  ಕಾಮಗಾರಿಗಾಗಿ ಮೈಸೂರು ಸರ್ಕಾರ ₨ 2 ಕೋಟಿ ಖರ್ಚು ಮಾಡಿದೆ. ಸುರಂಗ ನಿರ್ಮಾಣಕ್ಕೆ ₨ 74,25, 693 ವೆಚ್ಚ ತೋರಿಸಲಾಗಿದೆ.

ಸುರಂಗದ ರಚನೆ
ಎರಡೂವರೆ ಕಿ.ಮೀ. ಉದ್ದದ ಈ ಸುರಂಗವನ್ನು ಕಬ್ಬಿಣ, ಸೈಜುಗಲ್ಲು ಮತ್ತು ಸುರಕಿ ಗಾರೆಗಳಿಂದ ನಿರ್ಮಿಸಲಾಗಿದೆ. ಮೃದು ಮಣ್ಣು ಇರುವ ಕಡೆ ಕಲ್ಲು ಮತ್ತು ಸುರಕಿ ಗಾರೆ ಬಳಸಿ, 3,400 ಅಡಿಗಳಷ್ಟು ಕಾಮಗಾರಿ ನಡೆಸಲಾಗಿದೆ. ಸುರಂಗದ ಒಳಗೆ ಭೂಮಿ ಸಡಿಲ ಇರುವಲ್ಲಿ ಕಮಾನು ರಚಿಸಿ ಕುಸಿಯದಂತೆ ಭದ್ರಪಡಿಸಲಾಗಿದೆ. ಈ ಕಮಾನುಗಳಿಗೆ ಅಮೆರಿಕದ ರ್‌್ಯಾನೆಂಡ್‌ ಕಂಪೆನಿಯ ಕಬ್ಬಿಣದ ಸಲಕರಣೆಗಳನ್ನು ಜೋಡಿಸಲಾಗಿದೆ.

ಸುರಂಗದಿಂದ ಕಲ್ಲು, ಮಣ್ಣು ಹೊರ ತೆಗೆಯಲು 200 ಎಚ್‌ಪಿಯ 6 ಕಂಪ್ರೆಷರ್‌ಗಳು ಹಾಗೂ 30 ಎಚ್‌ಪಿಯ 2 ಹಾಯ್‌ಸ್ಟಿಂಗ್‌ ಯಂತ್ರಗಳನ್ನು ಬಳಸಲಾಗಿತ್ತು. ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದ 2 ಸಾವಿರ ಕಾರ್ಮಿಕರು ಮಾತ್ರವಲ್ಲದೆ ಪಂಜಾಬ್‌ನಿಂದಲೂ ಸಾವಿರಾರು ಪಠಾಣರನ್ನು ಕರೆಸಲಾಗಿತ್ತು. ಹೆಣ್ಣಾಳಿಗೆ 4 ಆಣೆ ಮತ್ತು ಗಂಡಾಳಿಗೆ 6 ಆಣೆ ಕೂಲಿ ಕೊಡಲಾಗುತ್ತಿತ್ತು. ಸುರಕಿ ಗಾರೆಯನ್ನು ಸಾಗಿಸಲು ಕತ್ತೆಗಳನ್ನು ಬಳಸಲಾಗುತ್ತಿತ್ತು.

ಯಂತ್ರಗಳು ಕೊರೆದ ಮಣ್ಣು, ಕಲ್ಲುಗಳನ್ನು ಎತ್ತಿನ ಗಾಡಿಯ ಮೂಲಕ ಹೊರಕ್ಕೆ ಸಾಗಿಸಲಾಗುತ್ತಿತ್ತು. ದಿನವೊಂದಕ್ಕೆ ಗಾಡಿ ಬಾಡಿಗೆಯಾಗಿ 2ರೂಪಾಯಿ ಪಾವತಿಸಲಾಗುತ್ತಿತ್ತು. ಗುತ್ತಿಗೆದಾರರಿಗೆ ಹಣ ಕೊಡಲು ಹುಲಿಕೆರೆ ಗ್ರಾಮದಲ್ಲಿ ಉಪ ಖಜಾನೆಯೊಂದನ್ನು ಸರ್ಕಾರ ತೆರೆದಿತ್ತು. ಆಸ್ಪತ್ರೆ, ದೊಡ್ಡ ವರ್ಕ್‌ಶಾಪ್‌ ಮತ್ತು ಪೊಲೀಸ್‌ ಠಾಣೆಗಳೂ ಅಲ್ಲಿದ್ದವು. ಸುರಂಗದ ಕಾಮಗಾರಿ ನಡೆಯುವ ವೇಳೆ 18 ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂಬ ಉಲ್ಲೇಖವಿದೆ.

2,135 ಕ್ಯೂಸೆಕ್‌ ನೀರು ಹರಿಯುವಂತೆ ತೋಡಿರುವ ಈ ಸುರಂಗದ ಸರಾಸರಿ ಅಗಲ 12.55 ಅಡಿಗಳು. ನಾಲೆಯ ನೀರಿನ ಆಳ 13.77 ಅಡಿ. 175.75 ಚದರ ಅಡಿ ವಿಸ್ತೀರ್ಣದ ನಾಲೆಯಲ್ಲಿ ಸುರಂಗದ ಒಳಗೆ ಪ್ರತಿ ಸೆಕೆಂಡಿಗೆ 12.38 ಅಡಿಗಳಷ್ಟು ನೀರಿನ ವೇಗವಿದೆ.

ಸುರಂಗದ ಮೇಲೆ ಬೇಸಾಯ
ಹುಲಿಕೆರೆ ಸುರಂಗದ ಮೇಲೆ ರೈತರು ನಿರಂತರವಾಗಿ ಕೃಷಿ ಮಾಡುತ್ತಾ ಬಂದಿದ್ದಾರೆ. ನೆಲಮಟ್ಟದಿಂದ 142 ಅಡಿ ಆಳದಲ್ಲಿ ಸುರಂಗ ನಾಲೆ ಹರಿಯುತ್ತಿದ್ದರೆ ಅದರ ಮೇಲೆ ನಿರಂತರವಾಗಿ ಬೇಸಾಯ ನಡೆಯುತ್ತಿದೆ. ರಾಗಿ, ಜೋಳ, ಔಡಲ, ಅಲಸಂದೆ, ಎಳ್ಳು ಇತರ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಇಷ್ಟು ಆಳಕ್ಕೆ ನಾಲೆ ತೋಡಿದ್ದರಿಂದ ಹುಲಿಕೆರೆ ಮತ್ತು 8 ಗ್ರಾಮಗಳಿಗೆ ನೀರಿನ ಆಕರಗಳಾಗಿದ್ದ ಕೆರೆ, ಕುಂಟೆಗಳು ಬತ್ತಿ ಹೋದವು. ರೈತರ ಮನವಿಯ ಮೇರೆಗೆ 1940ರ ನಂತರ ಯಂತ್ರಗಳನ್ನು ಬಳಸಿ ನಾಲೆಯಿಂದ ನೀರೆತ್ತಿ ಕೃಷಿಗೆ ಬಳಸಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿತು. ಹಾಗಾಗಿ ಕೆಲವರು ಕಬ್ಬು, ತೆಂಗು, ಬಾಳೆ, ಹಿಪ್ಪುನೇರಳೆ, ತರಕಾರಿ ಮೊದಲಾದ ತೋಟಗಾರಿಕಾ ಬೆಳೆಗಳನ್ನೂ ಬೆಳೆಯುತ್ತಿದ್ದಾರೆ.

ಮುಂದೆ ಸಾಗುತ್ತಾ....
ಹುಲಿಕೆರೆ ಸುರಂಗದಿಂದ ಹೊರ ಬರುವ ನಾಲೆ ಮುಂದೆ ತನ್ನ ವಿತರಣಾ ನಾಲೆಗಳ ಮೂಲಕ ಮಂಡ್ಯ, ಕೆರಗೋಡು, ಕೊಪ್ಪ, ಮದ್ದೂರು, ಮಳವಳ್ಳಿಯ ಸಹಸ್ರಾರು ಎಕರೆಯಷ್ಟು ಬರಡು ನೆಲ ಸದಾ ಹಸಿರಾಗಿರುವಂತೆ ಮಾಡಿದೆ.

ಇಂತಿಪ್ಪ ನಾಲೆಯಲ್ಲೀಗ ಮಣ್ಣುಕುಸಿತದಿಂದ ರಿಪೇರಿ ಕಾರ್ಯ ನಡೆದಿದೆ. ಆದ್ದರಿಂದ ನೀರು ಸ್ಥಗಿತವಾಗಲಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ಶಂಕರೇಗೌಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.