ADVERTISEMENT

ಬೆನ್ನ ಮೇಲೆ ಉಪೇಂದ್ರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 19:30 IST
Last Updated 26 ಡಿಸೆಂಬರ್ 2017, 19:30 IST
ತಾವು ಹಾಕಿದ ಹಚ್ಚೆ ಕಲೆಯೊಂದಿಗೆ ಕಲಾವಿದ ಶಂಕರ್
ತಾವು ಹಾಕಿದ ಹಚ್ಚೆ ಕಲೆಯೊಂದಿಗೆ ಕಲಾವಿದ ಶಂಕರ್   

ನೆಚ್ಚಿನ ಸಿನಿಮಾ ನಟ–ನಟಿಯರ ಅಭಿಮಾನಕ್ಕಾಗಿ ಅಭಿಮಾನಿಗಳು ನಾನಾ ಥರದ ಕಸರತ್ತು ಮಾಡುವುದು ಗೊತ್ತಿರುವಂಥದ್ದೇ. ಇಲ್ಲೊಬ್ಬ ಅಭಿಮಾನಿ ತನ್ನ ಬೆನ್ನ ಮೇಲೆ ನೆಚ್ಚಿನ ನಟನ ಭಾವಚಿತ್ರವನ್ನೇ ಹಚ್ಚೆ ಹಾಕಿಸಿಕೊಂಡಿದ್ದಾನೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಅರ್ಜುನ್‌ಗೆ ನಟ ಉಪೇಂದ್ರ ಅಂದ್ರೆ ಅಚ್ಚುಮೆಚ್ಚು. ಅವರ ಮೇಲಿನ ಪ್ರೀತಿ, ಅಭಿಮಾನಕ್ಕಾಗಿ ಬೆನ್ನಿನ ಮೇಲೆ ನಟನ ಭಾವಚಿತ್ರ ಹಾಕಿಸಿಕೊಂಡಿದ್ದಾನೆ. ಅಂದಹಾಗೆ ಈ ಉಪೇಂದ್ರ ಅವರ ಮುಖಭಾವವನ್ನು ಯಥಾವತ್ತಾಗಿ ಅರ್ಜುನ್ ಅವರ ಬೆನ್ನ ಮೇಲೆ ಸುಂದರವಾಗಿ ಹಚ್ಚೆ ಹಾಕಿದ ಕೀರ್ತಿ ಬೆಂಗಳೂರಿನ ಹಚ್ಚೆ ಕಲಾವಿದ ಶಂಕರ್ ಅವರದ್ದು.

ಬೆಂಗಳೂರಿನ ರಾಜಾಜಿನಗರದ ಬಾಷ್ಯಂ ವೃತ್ತದಲ್ಲಿ ಸ್ವಾಗತ್ ಟ್ಯಾಟೂ ಸ್ಟುಡಿಯೊ ಇಟ್ಟುಕೊಂಡಿರುವ ಶಂಕರ್, ಈಗಾಗಲೇ ನಟರಾದ ಪುನೀತ್, ಸುದೀಪ್, ಯಶ್, ದರ್ಶನ್ ಅವರ ಚಿತ್ರಗಳನ್ನು ಅಭಿಮಾನಿಗಳ ದೇಹದ ಮೇಲೆ ಹಚ್ಚೆ ರೂಪದಲ್ಲಿ ಹಾಕಿದ್ದಾರೆ. ಇತ್ತೀಚೆಗೆ ಗೃಹಿಣಿಯೊಬ್ಬರು ತಮ್ಮ ಪತಿಯ ಹುಟ್ಟುಹಬ್ಬಕ್ಕಾಗಿ ಪತಿಯ ಭಾವಚಿತ್ರವನ್ನೇ ಮುಂಗೈ ಮೇಲೆ ಹಾಕಿಸಿಕೊಂಡಿದ್ದರು ಎಂದು ನುಡಿಯುತ್ತಾರೆ ಶಂಕರ್.

ADVERTISEMENT

‘ಈವರೆಗೆ ಸಣ್ಣ ಗಾತ್ರದ ಹಚ್ಚೆಗಳನ್ನೇ ಹಾಕಿದ್ದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡದಾಗಿ ನಟನೊಬ್ಬನ ಹಚ್ಚೆ ಹಾಕಿದ್ದೇನೆ. ಇದಕ್ಕಾಗಿ 13 ತಾಸುಗಳನ್ನು ವ್ಯಯಿಸಿದ್ದೇನೆ. ಹಚ್ಚೆ ಹಾಕಿದ ಬಳಿಕ ಉಪೇಂದ್ರ ಅವರನ್ನು ಭೇಟಿಯಾಗಿದ್ದೆವು. ಅವರು ತುಂಬಾ ಖುಷಿಪಟ್ಟರು. ಅಭಿಮಾನಿ ಅರ್ಜುನ್ ಅವರಿಗೆ ದೊಡ್ಡದೊಂದು ಹೂಹಾರ ಹಾಕಿ ಸನ್ಮಾನಿಸಿದರು. ನನ್ನ ಕಲೆ ಮೆಚ್ಚಿ ಪುಸ್ತಕದ ಉಡುಗೊರೆ ನೀಡಿ ಗೌರವಿಸಿದರು’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಈ ಹಚ್ಚೆ ಕಲಾವಿದ.

ಈ ಹಿಂದೆ ಶಿವಾಜಿ ಮಹಾರಾಜರ ಹಚ್ಚೆ ಹಾಕಲು 18 ತಾಸು ಶ್ರಮ ಪಟ್ಟಿದ್ದೆ. ಸಂಗೊಳ್ಳಿ ರಾಯಣ್ಣ, ಗಣೇಶ ಇತ್ಯಾದಿ ದೇವರ ಚಿತ್ರವನ್ನೂ ಹಚ್ಚೆ ಹಾಕಿದ್ದೇನೆ. ಇದು ಸೂಕ್ಷ್ಮ ಕಲೆ. ತುಸು ಎಚ್ಚರ ತಪ್ಪಿದರೂ ಅಂದುಕೊಂಡ ವಿನ್ಯಾಸವನ್ನು ಹಾಕಲಾಗದು. ಸರಿ ಬಂದಿಲ್ಲ ಎಂದು ಮತ್ತೆ ಅಳಿಸಲೂ ಆಗುವುದಿಲ್ಲ’ ಎಂದು ಶಂಕರ್ ತಮ್ಮ ವೃತ್ತಿಬದುಕಿನ ಕೌಶಲ ಬಿಚ್ಚಿಡುತ್ತಾರೆ.

ಶಂಕರ್ ಸಂಪರ್ಕ ಸಂಖ್ಯೆ: 97399 60999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.