ADVERTISEMENT

ಭಾವನೆ ನಿಯಂತ್ರಿಸಿ

ಡಾ.ರಂಜಿತಾ ಎ.ಎ
Published 4 ಜನವರಿ 2013, 19:59 IST
Last Updated 4 ಜನವರಿ 2013, 19:59 IST
ಭಾವನೆ ನಿಯಂತ್ರಿಸಿ
ಭಾವನೆ ನಿಯಂತ್ರಿಸಿ   

ಜೀವನ ಮತ್ತು ಭಾವನೆ ನಡುವಿನ ಸರಪಳಿ ಬಹಳ ಗಟ್ಟಿಯಾದದ್ದು. ಭಾವನೆಗಳ ಮೇಲಿನ ಹಿಡಿತ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಆಯುರ್ವೇದದ ಪ್ರಕಾರ ಆರೋಗ್ಯ ಎಂದರೆ,

      ಸಮದೋಷ ಸಮಾಗ್ನಿಶ್ಚ ಸಮಧಾತು ಮಲಕ್ರಿಯ
      ಪ್ರಸನ್ನ ಆತ್ಮ ಇಂದ್ರಿಯ ಮನಃ ಸ್ವಸ್ಥ ಇತ್ಯಭಿದೀಯತೆ

ಪ್ರಸನ್ನ ಮನವು ಉತ್ತಮ ಆರೋಗ್ಯ ಹೊಂದುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂಬುದು ಇದರಿಂದ ತಿಳಿಯುತ್ತದೆ. ಮನಸ್ಸಿನ ಆರೋಗ್ಯವು ನಮ್ಮ ಭಾವನೆಗಳ ಮೇಲೆ ಹಿಡಿತ ಸಾಧಿಸುವುದರ ಮೇಲೆ ನಿಂತಿರುತ್ತದೆ.

ನಾವು ಯಾರೊಂದಿಗಾದರೂ ವ್ಯವಹರಿಸುವಾಗ ಅವರ ಮಾತುಗಳಿಂದ, ಕೆಲಸಗಳಿಂದ ಮತ್ತು ಅವರ ವರ್ತನೆಯಿಂದ ನಮಗೆ ಕೋಪ ಬರಬಹುದು. ಅದು ಸಹಜ. ಆಗ ಆ ಸನ್ನಿವೇಶವನ್ನು ಸರಿಯಾಗಿ ನಿಭಾಯಿಸುವುದು ಮುಖ್ಯ.

ಬಗೆ ಹೇಗೆ?
ಆಗ ನಾವು ಆಲೋಚಿಸಬೇಕಾದ ಸಂಗತಿ ಎಂದರೆ ಆ ವ್ಯಕ್ತಿ ನಮಗೆ ಮುಖ್ಯವೇ ಹೊರತು ಆ ಕ್ಷಣದಲ್ಲಿ ನಮಗೆ ಬರುವ ತಾತ್ಕಾಲಿಕ ಕೋಪವಲ್ಲ. ಒಂದು ವೇಳೆ ನಾವು ಬಾಯಿಗೆ ಬಂದ ಹಾಗೆ ಅವರಿಗೆ ಬಯ್ದರೆ ಅದರಿಂದ ಸಂಬಂಧಗಳ ನಡುವೆ ಬಿರುಕು ಉಂಟಾಗುತ್ತದೆ ಹೊರತು ಅವರು ಆಡಿದ ಮಾತಾಗಲೀ, ಕೆಲಸವಾಗಲೀ ಬದಲಾಗದು.

ಕೆಲವೊಮ್ಮೆ ನಮಗೆ ನಮ್ಮ ವಸ್ತುಗಳನ್ನು ಕಳೆದುಕೊಂಡಾಗ ಅಥವಾ ಅದು ಹಾಳಾದಾಗ ತುಂಬಾ ಬೇಸರವಾಗುತ್ತದೆ. ಇದಕ್ಕೆ ಕಾರಣ ಆ ವಸ್ತುಗಳ ಮೇಲೆ ನಮಗಿರುವ ಅತೀವ ವ್ಯಾಮೋಹ.

ನಿಭಾಯಿಸುವುದು ಹೇಗೆ?
ಉದಾಹರಣೆಗೆ ಒಂದು ಚೆಂದದ ಪೆನ್ನನ್ನು ಕೊಂಡುಕೊಂಡಿರಿ ಎಂದು ತಿಳಿಯಿರಿ. ಆಗಲೇ ನಿಮ್ಮ ಮನಸ್ಸಿನಲ್ಲಿ ಒಂದು ಸಣ್ಣ ಆಲೋಚನೆ ಇರಬೇಕು. ಒಂದಲ್ಲ ಒಂದು ದಿನ ಅದು ಕಳೆದುಹೋಗಬಹುದು/ ಹಾಳಾಗಬಹುದು ಎಂದು. ಹೀಗೆ ಆಲೋಚಿಸಿದ್ದೇ ಆದರೆ ಅದನ್ನು ಕಳೆದುಕೊಂಡಾಗ ನಿಜವಾಗಲೂ ನಮಗೆ ಬೇಸರ ಆಗುವುದಿಲ್ಲ. ಇದನ್ನೇ ಸ್ವಾಮಿ ವಿವೇಕಾನಂದರು `ಡಿಟ್ಯಾಚ್ಡ್ ಅಟ್ಯಾಚ್‌ವೆುಂಟ್' ಎಂದು ಹೇಳಿದ್ದು.

ಮನಸ್ಸಿನ ಚಂಚಲತೆಗೆ ಇನ್ನೊಂದು ಕಾರಣ ಹೋಲಿಕೆ ಮಾಡುವ ಪದ್ಧತಿ. ಹೆಚ್ಚಿನ ಭಾವನೆಗಳ ಏರಿಳಿತಕ್ಕೆ ಇದು ಮುಖ್ಯವಾದ ಕಾರಣವಾಗುತ್ತದೆ. ಪ್ರತಿಯೊಬ್ಬರೂ ವಿಭಿನ್ನ ಬುದ್ಧಿಮತ್ತೆ ಮತ್ತು ಸಾಮರ್ಥ್ಯ ಹೊಂದಿರುತ್ತಾರೆ. ಹೀಗಾಗಿ ಬೇರೆಯವರನ್ನು ನಮ್ಮಂದಿಗೆ ಹೋಲಿಸಿ ನೋಡಿಕೊಳ್ಳುವುದು ಸರಿಯಲ್ಲ.
ಹೀಗೆ ನಮ್ಮ ದಿನನಿತ್ಯದ ಬದಕಿನಲ್ಲಿ ಎದುರಾಗುವ ಹಲವು ಭಾವನೆಗಳ ಮೇಲೆ ಹಿಡಿತ ಸಾಧಿಸಿದ್ದೇ ಆದರೆ, ಜೀವನದ ಸವಿಯನ್ನು ನಾವು ಸವಿಯಲು ಸಾಧ್ಯ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.