ADVERTISEMENT

ಆಡಿದ ಮಾತು, ಒಡೆದ ಮುತ್ತು

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST

ಇದು ಸುಮಾರು 34 ವರ್ಷಗಳ ಹಿಂದಿನ ಘಟನೆ. ಬ್ಯಾಂಕ್‌ನಲ್ಲಿ ನನಗೆ ಕೆಲಸ ಸಿಕ್ಕಿತ್ತು. ರಾಯಚೂರು ಜಿಲ್ಲೆಯ ಸಿಂಧನೂರು ಶಾಖೆಯಲ್ಲಿ ಕೆಲಸ ಮಾಡಲು ಆರಂಭಿಸಿ ಸುಮಾರು ಮೂರು ವರ್ಷಗಳಾಗಿದ್ದವು. ನಾನು ನಗದು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ನಮ್ಮ ಶಾಖೆಯಲ್ಲಿದ್ದ ಜಂಬೂಸ ಹೆಸರಿನ ಹಿರಿಯ ಜವಾನರೊಬ್ಬರು ನನಗೆ ಸಹಾಯಕರಾಗಿದ್ದರು.

ಒಮ್ಮೆ ನನಗೆ ಕೌಂಟರಿನಲ್ಲಿ ಸ್ವೀಕರಿಸಿದ ಹಣದ ಲೆಕ್ಕ ತಾಳೆಯಾಗಲಿಲ್ಲ. ಒತ್ತಡಕ್ಕೆ ಸಿಲುಕಿದ ನನ್ನ ಮನಸ್ಸು ಮಾತಿನ ಮೇಲಿನ ಹಿಡಿತವನ್ನು ಕಳೆದುಕೊಂಡಿತ್ತು. ಜಂಬೂಸ ಅವರಿಗೆ ’ನೀನಲ್ಲದೆ ಇಲ್ಲಿಗೆ ಮತ್ತ್ಯಾರೂ ಬರಲು ಸಾಧ್ಯವಿಲ್ಲ...’ ಎಂದು ಗದರಿಬಿಟ್ಟೆ. ಅವರು ಇದರಿಂದ ಸಿಟ್ಟಿಗೇಳಲಿಲ್ಲ, ನೊಂದುಕೊಂಡರು. ’ಮೂವತ್ತು ವರ್ಷದಿಂದ ಇಲ್ಲಿ ದುಡಿಯುತ್ತಿದ್ದೇನೆ ಸಾರ್. ಯಾವತ್ತೂ ಇಂತಹ ಮಾತನ್ನು ಕೇಳಿರಲಿಲ್ಲ’ ಅಂದರು.

ಈ ಪ್ರಕರಣದಲ್ಲಿ ಅವರ ತಪ್ಪು ಎಳ್ಳಷ್ಟೂ ಇರಲಿಲ್ಲ. ನಾನೇ ಗ್ರಾಹಕರೊಬ್ಬರಿಂದ ಕಡಿಮೆ ಹಣ ಸ್ವೀಕರಿಸಿದ್ದೆ. ನನಗೆ ನನ್ನ ತಪ್ಪಿನ ಅರಿವಾಯಿತು. ಆದರೆ ಕ್ಷಮೆ ಕೇಳಲು ಮನಸ್ಸು ಒಪ್ಪಲಿಲ್ಲ. ನನ್ನೊಳಗೆ ಏನೋ ನೆಮ್ಮದಿಯಿಲ್ಲದ ಕಸಿವಿಸಿ.

ADVERTISEMENT

ಆಗ ಅದೇ ಶಾಖೆಯಲ್ಲಿ ಪ್ರದೀಪ್ ಪುರಾಣಿಕ್ ಅಂತ ಅಧಿಕಾರಿಯಿದ್ದರು. ಅವರೊಡನೆ ಈ ಸಂಗತಿಯನ್ನು ತೆರೆದಿಟ್ಟೆ. ’ನಮ್ಮಿಂದ ತಪ್ಪಾದಾಗ ಕ್ಷಮೆ ಕೇಳಬೇಕು. ಹಾಗೆ ಮಾಡಿದಾಗ ಮಾತ್ರ ಮನಸು ನಿರಾಳವಾಗುತ್ತದೆ. ನೀವು ಅವರಲ್ಲಿ ಕ್ಷಮೆ ಕೇಳುವುದು ಒಳ್ಳೆಯದು’ ಎಂದು ಹಿತನುಡಿದರು.

ಮರುದಿನ ಬ್ಯಾಂಕಿಗೆ ಹೋದೊಡನೆ ಜಂಬೂಸ ಅವರನ್ನು ಭೇಟಿಯಾಗಿ ಕ್ಷಮೆಯಾಚಿಸಿದೆ. ನನ್ನ ಮನಸ್ಸು ನಿರಾಳವಾಯಿತು. ಮುಂದೆ ಯಾವುದೇ ಸಂದರ್ಭದಲ್ಲೂ ನನ್ನ ಮಾತನ್ನು ಮನಸ್ಸಿನ ಉದ್ವೇಗಕ್ಕೆ ಬಲಿಕೊಡದೆ ಎಚ್ಚರವಹಿಸತೊಡಗಿದೆ. ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎನ್ನುವ ಹಿರಿಯರ ನುಡಿ ಅಂದು ನನಗೆ ಅರ್ಥವಾಗಿತ್ತು.

– ಧರ್ಮಾನಂದ ಶಿರ್ವ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.