ADVERTISEMENT

ಇನ್ ಬಾಕ್ಸ್

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ಅನಿರುದ್ಧರ `ಅಪ್ಪಾ ಯಯಾತಿಗಳೇ....~ ಲೇಖನಕ್ಕೆ ಪ್ರತಿಕ್ರಿಯೆ. ಅನಿರುದ್ಧರು ಆಡಿರುವಂಥ ಮಾತು ಎಲ್ಲಾ ಕಾಲದ್ದೂ ಹೌದು. ಒಂದೆಪ್ಪತ್ತು ವರ್ಷ ಬದುಕಿದ್ದರೆ, ಒಂದೆರಡು ಬಾರಿಯಾದರೂ ಇಂಥದೇ ಧ್ವನಿಯನ್ನು ಕೇಳಿಸಿಕೊಳ್ಳಬಹುದು. ಹಿರಿಯನ್ನು ಟೀಕಿಸುವ ಮೊದಲು ಈ ಹಿರಿಯರೇ ವಿಶ್ವ ಶಾಂತಿ, ಜಾಗತಿಕ  ಒಕ್ಕೂಟ ಮುಂತಾದುವುಗಳ ಬಗ್ಗೆಯೂ ಚಿಂತಿಸಿದವರು. 

ಜಾತ್ಯತೀತ ಸಮಾಜವನ್ನು ಕಲ್ಪಿಸಿಕೊಂಡವರು. ಬಡತನ ನೀಗಿಸಬೇಕು ಎನ್ನುವ ತವಕದಲ್ಲಿ, ಆರ್ಥಿಕ ಅಭಿವೃದ್ಧಿಯ ದಾವಂತದಲ್ಲಿ ತಪ್ಪುಗಳನ್ನೂ ಮಾಡಿದ್ದಾರೆ. ಈ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದುವರಿಯುವುದು ಮುಂದಿನ ಪೀಳಿಗೆಯ ಕೆಲಸ.
 
ಯಾವುದೇ ಪೀಳಿಗೆಯೂ ಹಿಂದಿನವರ  ಅವರವರ ಕಾಲವನ್ನು ಅವರೇ ನಿಭಾಯಿಸಬೇಕು. ಅವರಿಗೆ ಮುಂದುವರಿಯಲು ಅನೇಕ ಧನಾತ್ಮಕ  ವಿಷಯಗಳನ್ನೂ ಹಿರಿಯರು ಕಟ್ಟಿಕೊಟ್ಟಿದ್ದಾರೆ. ಅವನ್ನು ಗಮನಿಸದೆ ಕೇವಲ ಋಣಾತ್ಮಕ ವಿಷಯಗಳ ಯಾದಿ ತಯಾರಿಸುವುದು  ಕೃತಘ್ನತೆ ಯಾಗುತ್ತದೆ. 
-ಕೆ ಎಸ್ ಪಾರ್ಥಸಾರಥಿ, ಬೆಂಗಳೂರು

ಕಾಮನಬಿಲ್ಲು ಬದುಕಿನ ನವ ಚಿತ್ತಾರದ ಹೊಸ ಕಲ್ಪನೆಯೊಂದಿಗೆ ಜೀವನದ ಉತ್ಸಾಹವನ್ನು ಇಮ್ಮುಡಿ ಗೊಳಿಸಿದೆ.  ದೇವು ಪತ್ತಾರ ಅವರ ಲೇಖನ ಉತ್ತಮವಾಗಿ ಯುವ ಮನಸ್ಸಿನ ಹಂಬಲ ಅವರ ಹವ್ಯಾಸ ಸಮಾಜ ಪ್ರಕೃತಿಯ ಬಗೆಗಿನ ಜಾಗೃತ ಭಾವದೊಂದಿಗೆ ಗ್ರಾಮೀಣ ಭಾಗದ ಹಲವು ಸಂಕಷ್ಟಗಳನ್ನು ಬಿಂಬಿಸಿ ಯುವ ಮನಸ್ಸಿಗೆ ಸ್ಪೂರ್ತಿದಾಯಕವಾಗಿದೆ . ಪಂಡರಿನಾಥ, ವಿವೇಕಾನಂದ ಅವರ ಬದುಕು ಉತ್ತಮವಾಗಿ ಬಿಂಬಿತವಾಗಿದೆ
-ಭರತ್‌ರಾವ್, ಶಿವಮೊಗ್ಗ

`ಪ್ರಜಾವಾಣಿ~ ಹೊಸ ವರ್ಷಕ್ಕೆ `ಕಾಮನಬಿಲ್ಲು~ ಪುರವಣಿಯನ್ನು ಸೇರ್ಪಡೆಗೊಳಿಸಿದ್ದು ಸಂತೋಷ ತಂದಿತು. `ಈ ಮಂದಣ್ಣರಿಗೆ ಕರ್ವಾಲೊ~ ಬೇಕು ಲೇಖನ ಓದಿ ಇಪ್ಪತ್ತು ವರ್ಷಗಳ ಹಿಂದೆ ನಾವು ಪದವಿ ತರಗತಿಯಲ್ಲಿದ್ದಾಗ ನಮಗೆ ಪಠ್ಯವಾಗಿದ್ದ ಕರ್ವಾಲೊ ಕಾಂದಬರಿ ಕಣ್ಣ ಮುಂದೆ ಬಂತು.
 
ವಿವೇಕ್ ಮತ್ತು ಪಂಢರಿಯವರಿಗೆ ಅವರ ಹವ್ಯಾಸಕ್ಕೆ ಸಂಬಂಧಿಸಿದಂತೆ ಇನ್ನೂ ಉತ್ತಮ ಶಿಕ್ಷಣ ಮತ್ತು ತರಬೇತಿ ದೊರೆತರೆ ಕೃಪಾಕರ-ಸೇನಾನಿಯಂಥ ಮತ್ತೊಂದು ಜೋಡಿ ನಮ್ಮ ಕರ್ನಾಟಕಕ್ಕೆ ಸಿಕ್ಕೀತು.
-ಡಾ.ಟಿ.ಎಸ್. ಕುಪ್ಪಣ್ಣ, ರಾಯಚೂರು

ADVERTISEMENT

ಕಾಮನ ಬಿಲ್ಲು ಪುರವಣಿಗೆಯು ತುಂಬಾ ಇಷ್ಟಾವಾಯಿತು.  ಯುವಕರ ಹೊಸ ಕಾಲದ ಹೊಸ ಭಾಷೆಯ ಅರ್ಥ ತಿಳಿಸುವ ಸೀಳ್‌ನುಡಿ ಸ್ವಾಗತಾರ್ಹ. ಇದರಲ್ಲಿ ಯುವಕರ ಸಾಧನೆ, ವ್ಯಕ್ತಿತ್ವ ವಿಕಸನ, ಇಂದಿನ ಸ್ಪರ್ಧಾತ್ಮಕತೆಗೆ ಯುವಕರ ಸವಾಲು ಮುಂತಾದುವುಗಳ ಕುರಿತ ಲೇಖನಗಳು ಪ್ರಕಟವಾಗಲಿ ಎಂಬುದು ನನ್ನ ವಿನಂತಿ.
-ವಾಸು ಚವ್ಹಾಣ ಶಹಾಬಾದ,  ಗುಲಬರ್ಗಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.