ADVERTISEMENT

ಅಂಪೈರ್ ಎಡವಟ್ಟು; ದೋನಿ ಕೋಪ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST

ನಾಗಪುರ: ಈ ಟೆಸ್ಟ್ ಪಂದ್ಯದಲ್ಲಿ ಅಂಪೈರ್‌ಗಳು ನೀಡಿದ ಕೆಲ ತೀರ್ಪುಗಳು ವಿವಾದಾತ್ಮಕವಾಗಿದ್ದವು. ಇಂಗ್ಲೆಂಡ್ ತಂಡದ ನಾಯಕ ಕುಕ್ ಕ್ಯಾಚ್‌ಗೆ ಸಂಬಂಧಿಸಿದಂತೆ ಧರ್ಮಸೇನಾ ಹಾಗೂ ಕಾಂಪ್ಟನ್ ಎಲ್‌ಬಿಡಬ್ಲ್ಯು ವಿಷಯದಲ್ಲಿ ಟಕ್ಕರ್ ನೀಡಿದ ತೀರ್ಪುಗಳು ಸಮರ್ಪಕವಾಗಿರಲಿಲ್ಲ.

ನಾಲ್ಕನೇ ದಿನದಾಟದ ವೇಳೆ ಆಫ್ ಸ್ಪಿನ್ನರ್ ಅಶ್ವಿನ್ ಎಸೆತದಲ್ಲಿ ಕುಕ್ ಬ್ಯಾಟ್‌ಗೆ ಸವರಿಕೊಂಡು ಹೋದಂತಿದ್ದ ಚೆಂಡು ದೋನಿ ಕೈಸೇರಿತು. ಭಾರತದ ಆಟಗಾರರು ಮಾಡಿದ ಮನವಿಗೆ ಧರ್ಮಸೇನಾ ಬೇಗನೇ ಸ್ಪಂದಿಸಿದರು. ಆದರೆ ರಿಪ್ಲೇನಲ್ಲಿ ಬ್ಯಾಟ್‌ನಿಂದ ಚೆಂಡು ದೂರದ್ಲ್ಲಲಿದ್ದಂತೆ ಕಂಡಿತು. ಮೊದಲ ಇನಿಂಗ್ಸ್‌ನಲ್ಲೂ ಕುಕ್ ವಿಷಯದಲ್ಲಿ ಈ ಅಂಪೈರ್ ಎಡವಟ್ಟು ಮಾಡಿದ್ದರು.

ಹಾಗೇ, ಓಜಾ ಎಸೆತ ಕಾಂಪ್ಟನ್ ಅವರ ಪ್ಯಾಡ್‌ಗೆ ಬಡಿಯುವ ಮುನ್ನ ಬ್ಯಾಟ್‌ಗೆ ಸ್ಪರ್ಶಿಸಿತ್ತು. ಆದರೆ ಟಕ್ಕರ್ ಎಲ್‌ಬಿಡಬ್ಲ್ಯು ಔಟ್ ನೀಡಿದರು. ಆ ಚೆಂಡನ್ನು ಗಲ್ಲಿಯಲ್ಲಿ ಕೊಹ್ಲಿ ಕ್ಯಾಚ್ ಕೂಡ ಪಡೆದಿದ್ದರು. ಅಂಪೈರ್ ತೀರ್ಪು ಪರಿಶೀಲನಾ ಪದ್ಧತಿ ಇಲ್ಲದಿರುವುದು ಈ ಗೊಂದಲಕ್ಕೆ ಕಾರಣವಾಗಿದೆ. 

ಬಳಿಕ ಇಶಾಂತ್ ಎಸೆತದಲ್ಲಿ ಟ್ರಾಟ್ ಬ್ಯಾಟ್‌ಗೆ ಸವರಿಕೊಂಡು ಹೋದಂತಿದ್ದ ಚೆಂಡು ದೋನಿ ಕೈ ಸೇರಿತು. ಆದರೆ ಧರ್ಮಸೇನಾ ಔಟ್ ನೀಡಲಿಲ್ಲ. ಸದಾ ಶಾಂತಚಿತ್ತವಾಗಿರುವ ದೋನಿ ಒಮ್ಮೆಲೇ ತಾಳ್ಮೆ ಕಳೆದುಕೊಂಡು ಅರಚಿದರು.

ಆ ಓವರ್ ಬಳಿಕ ದೋನಿ ಹಾಗೂ ಕೊಹ್ಲಿ ಅಂಪೈರ್ ಜೊತೆ ವಾಗ್ವಾದಕ್ಕೂ ಮುಂದಾದರು. ಟ್ರಾಟ್ ಜೊತೆ ಮಾತಿನ ಚಕಮಕಿ ಕೂಡ ನಡೆಯಿತು. ಏಕೆಂದರೆ ಇಶಾಂತ್ ಅವರತ್ತ ಟ್ರಾಟ್ ಗಾಳಿಯಲ್ಲಿ ಕಿಸ್ ತೇಲಿಬಿಟ್ಟು ವ್ಯಂಗ್ಯಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.