ಮೈಸೂರು: ಮೈಸೂರು ಜಿಲ್ಲಾ ಚೆಸ್ ಅಸೋಸಿಯೇಷನ್ (ಎಂಡಿಸಿಎ) ವತಿಯಿಂದ ನಗರದ ಜೆಎಲ್ಬಿ ರಸ್ತೆಯಲ್ಲಿರುವ ಎಂಜಿನಿಯರ್ ಸಂಸ್ಥೆಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಏ.15 ರಿಂದ 19ರ ವರೆಗೆ 3ನೇ ಎಂಡಿಸಿಎ ಅಖಿಲ ಭಾರತ ಮುಕ್ತ ಫಿಡೆ ರೇಟಿಂಗ್ ಚೆಸ್ ಟೂರ್ನಿ ಆಯೋಜಿಸಲಾಗಿದೆ.
ಅಂತರರಾಷ್ಟ್ರೀಯ ಆಟಗಾರರಾದ (ಐಎಂ) ಜಾರ್ಖಂಡ್ನ ಹಿಮಾಂಶು ಶರ್ಮ (ರೇಟಿಂಗ್ 2403) ಮತ್ತು ಚೆನ್ನೈನ ಆರ್.ಬಾಲಸುಬ್ರಹ್ಮಣ್ಯಂ (ರೇ. 2245) ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.
`450ಕ್ಕೂ ಹೆಚ್ಚು ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ 250 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ರೂ.25 ಸಾವಿರ, ರೂ.20 ಸಾವಿರ, ರೂ.15 ಸಾವಿರ ನಗದು ಮತ್ತು ಪಾರಿತೋಷಕಗಳನ್ನು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ ಆಟಗಾರರಿಗೆ ನೀಡಲಾಗುವುದು.
ಒಟ್ಟು ರೂ.1.50 ಲಕ್ಷ ನಗದು ಬಹುಮಾನವನ್ನು ವಿಜೇತ ಆಟಗಾರರಿಗೆ ವಿತರಿಸಲಾಗುವುದು. ಮಕ್ಕಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ 7 ವರ್ಷದೊಳಗಿನ, 9 ವರ್ಷದೊಳಗಿನ, 11 ವರ್ಷದೊಳಗಿನ ಹಾಗೂ 13 ವರ್ಷದೊಳಗಿನವರ ವಿಭಾಗದಲ್ಲಿ ಬಹುಮಾನ ನೀಡಲಾಗುವುದು. ಎಂದು ಎಂಡಿಸಿಎ ಅಧ್ಯಕ್ಷ ಪ್ರೊ.ಎಸ್.ಕೆ.ಆನಂದತೀರ್ಥ `ಪ್ರಜಾವಾಣಿ'ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.