ADVERTISEMENT

ಅತಿಥೇಯರನ್ನು ಮಣಿಸುವ ಭರವಸೆ

ಪಿಟಿಐ
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST
ಅತಿಥೇಯರನ್ನು ಮಣಿಸುವ ಭರವಸೆ
ಅತಿಥೇಯರನ್ನು ಮಣಿಸುವ ಭರವಸೆ   

ಕೊಲಂಬೊ:  ಭಾರತ ತಂಡವು ನಿದಾಸ್ ಕಪ್‌ ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಮತ್ತೊಮ್ಮೆ ಎದುರಿಸಲು ಸಜ್ಜಾಗಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾಗೆ ಮಣಿದಿದ್ದ  ಭಾರತ ತಂಡವು ಎರಡನೇ ಪಂದ್ಯದಲ್ಲಿ ಬಾಂಗ್ಲಾ ದೇಶವನ್ನು ಸುಲಭವಾಗಿ ಸೋಲಿಸಿತ್ತು. ಹೀಗಾಗಿ ಮೂರನೇ ಪಂದ್ಯದಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ.

ಭಾರತದ ನಾಯಕ ರೋಹಿತ್ ಶರ್ಮಾ, ಈ ಪಂದ್ಯದಲ್ಲಿ ಲಯಕ್ಕೆ ಮರಳುವ ಛಲದಲ್ಲಿದ್ದಾರೆ. ಅವರು ಕಳೆದೆರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಕಣಕ್ಕಿಳಿ ಯುವ 11 ಆಟಗಾರರ ಬಳಗದ ಆಯ್ಕೆ ಯ ಸವಾಲೂ ಅವರ ಮುಂದೆ ಇದೆ.

ADVERTISEMENT

ಲಭಿಸಿದ ಅವಕಾಶಗಳನ್ನು ಸರಿ ಯಾಗಿ ಬಳಸಿಕೊಳ್ಳದ ರಿಷಭ್ ಪಂತ್‌ ಬದಲು ಕೆ.ಎಲ್‌.ರಾಹುಲ್ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.  ರಾಹುಲ್‌  ಮತ್ತು ಶಿಖರ್ ಧವನ್ ಇನಿಂಗ್ಸ್ ಆರಂಭಿಸಿದರೆ ರೋಹಿತ್ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.

ಸತತ ಎರಡು ಅರ್ಧಶತಕಗಳನ್ನು ಗಳಿಸಿರುವ ಶಿಖರ್ ಧವನ್‌ ಭಾರತದ ಅಗ್ರಕ್ರಮಾಂಕಕ್ಕೆ ಬಲ ತುಂಬಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಜಯದೇವ್ ಉನದ್ಕತ್‌ ಅವರಿಗೆ ಇನ್ನೂ ತಮ್ಮ ನಿಜವಾದ ಸಾಮರ್ಥ್ಯ ತೋರಲು ಆಗಿಲ್ಲ. ಎರಡು ಪಂದ್ಯಗಳಲ್ಲಿ ಒಟ್ಟು ನಾಲ್ಕು ವಿಕೆಟ್ ಉರುಳಿಸಿದರೂ ಹೆಚ್ಚು ರನ್‌ಗಳನ್ನು ನೀಡಿದ್ದಾರೆ.

ವಾಷಿಂಗ್ಟನ್ ಸುಂದರ್‌, ಯಜು ವೇಂದ್ರ ಚಾಹಲ್ ಮತ್ತು ವಿಜಯ್ ಶಂಕರ್‌ ಉತ್ತಮವಾಗಿ ಆಡಿ ಭರವಸೆ ಮೂಡಿಸಿದ್ದಾರೆ.

ಕುತೂಹಲದ ಘಟ್ಟ: ಮೂರು ತಂಡ ಗಳೂ ಆಡಿದ ತಲಾ ಎರಡು ಪಂದ್ಯಗಳ ಪೈಕಿ ಒಂದೊಂದನ್ನು ಗೆದ್ದಿರುವುದರಿಂದ ಟೂರ್ನಿ ಈಗ ರೋಚಕ ಘಟ್ಟ ತಲುಪಿದೆ. ರನ್‌ ಸರಾಸರಿಯಲ್ಲಿ ಮುಂದೆ ಇರುವ ಶ್ರೀಲಂಕಾ ನಿರುಮ್ಮಳವಾಗಿದೆ. ಆದರೆ ಮುಂದಿನ ಪಂದ್ಯದಲ್ಲಿ ಆ ತಂಡವನ್ನು ಮಣಿಸಿದರೆ ಭಾರತ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೆ ಏರಲಿದೆ.

ಆಘಾತದಿಂದ ಹೊರಬರುವ ಪ್ರಯತ್ನ: ಶನಿವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಐದು ವಿಕೆಟ್‌ಗಳಿಂದ ಸೋತಿರುವ ಶ್ರೀಲಂಕಾ ಆಘಾತದಿಂದ ಹೊರಬರುವ
ಪ್ರಯತ್ನದಲ್ಲಿದೆ.

35 ಎಸೆತಗಳಲ್ಲಿ 72 ರನ್‌ ಗಳಿಸಿದ ಮುಷ್ಫಿಕರ್ ರಹೀಮ್ ಅವರನ್ನು ನಿಯಂತ್ರಿಸಲು ಆಗದ ಶ್ರೀಲಂಕಾ ಬೌಲಿಂಗ್ ವಿಭಾಗ ತೀವ್ರ ಒತ್ತಡದಲ್ಲಿದೆ. ಇದರ ಲಾಭ ಪಡೆಯಲು ಸಾಧ್ಯವಾದರೆ ಭಾರತದ ಜಯದ ಹಾದಿ ಸುಲಭವಾಗಲಿದೆ.

ಬ್ಯಾಟಿಂಗ್ ವಿಭಾಗದಲ್ಲಿ ಕುಶಾಲ್ ಮೆಂಡಿಸ್ ಮತ್ತು ಕುಶಾಲ್‌ ಪೆರೇರ ಉತ್ತಮ ಲಯದಲ್ಲಿದ್ದಾರೆ. ಇವರನ್ನು ನಿಯಂತ್ರಿಸುವ ಸವಾಲು ಭಾರತದ ಬೌಲರ್‌ಗಳ ಮುಂದೆ ಇದೆ.

**

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.