ADVERTISEMENT

ಅಥ್ಲೆಟಿಕ್ಸ್: ರಾಜ್ಯ ತಂಡದ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ರಾಂಚಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ತಂಡವನ್ನು ಭಾನುವಾರ ಆಯ್ಕೆ ಮಾಡಲಾಯಿತು.

ವಿದ್ಯಾನಗರದ ಕ್ರೀಡಾ ಶಾಲೆ ಮೈದಾನದಲ್ಲಿ ಈ ಟ್ರಯಲ್ಸ್ ನಡೆಯಿತು. ಪುರುಷರ ವಿಭಾಗದಲ್ಲಿ 56 ಮತ್ತು ಮಹಿಳಾ ವಿಭಾಗದಲ್ಲಿ 12 ಸ್ಪರ್ಧಿಗಳು ಪಾಲ್ಗೊಂಡಿದ್ದರು. 100 ಹಾಗೂ 200 ಮೀಟರ್ ಓಟದಲ್ಲಿ ಅರುಣ್ ಕುಮಾರ್, ಸಲೀಂ ಶೇಖ್, ಜಿ.ಎನ್. ಬೋಪಣ್ಣ ಅವರು ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಅಂತರ ವಾರ್ಸಿಟಿ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ಹೈಜಂಪ್ ಸ್ಪರ್ಧಿ ಚೇತನ್, 800 ಮೀಟರ್ ಓಟದ ಸ್ಪರ್ಧೆಯಲ್ಲಿ ಆರ್. ಮಹಾಲಕ್ಷ್ಮಿ, ಉಮಾ ಭಾಗ್ಯಲಕ್ಷ್ಮಿ, 400ಮೀಟರ್ ಹರ್ಡಲ್ಸ್‌ನಲ್ಲಿ ಎಂ. ಅರ್ಪಿತಾ ಆಯ್ಕೆಯಾಗಿದ್ದಾರೆ.

ವೇಗದ ಓಟಗಾರ್ತಿ ಅಶ್ವಿನಿ ಅಕ್ಕುಂಜಿ ಸದ್ಯ ರಾಷ್ಟ್ರೀಯ ತರಬೇತಿ ಶಿಬಿರ ತರಬೇತಿಯಲ್ಲಿದ್ದಾರೆ. ಅವರು ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಮಾಜಿ ಹಾಗೂ ಹಿರಿಯ ಅಥ್ಲೀಟ್‌ಗಳಾದ ಉದಯ ಕೆ. ಪ್ರಭು, ಕೆನೆತ್ ಪೊವೆಲ್, ಎಸ್.ಡಿ. ಈಶನ್, ರೀತ್ ಅಬ್ರಹಾಂ ಮತ್ತು ಕೋಚ್ ಮರಳೀಧರನ್ ಅವರು ಆಯ್ಕೆ ಪ್ರಕ್ರಿಯೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.