ಚೆನ್ನೈ: ‘ನಾನು ಪರಿಪೂರ್ಣ ಕ್ರಿಕೆಟಿಗನಾಗಿ ರೂಪುಗೊಳ್ಳುವಲ್ಲಿ ಅಪ್ಪ ಸುಂದರ್ ಮತ್ತು ಕೋಚ್ಗಳ ಪಾತ್ರ ಮಹತ್ವದ್ದು. ಅವರು ಪ್ರತಿ ಹಂತದಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರಿಂದಲೇ ಎತ್ತರದ ಸಾಧನೆ ಮಾಡಲು ಸಾಧ್ಯವಾಗುತ್ತಿದೆ’ ಎಂದು ತಮಿಳುನಾಡಿನ ವಾಷಿಂಗ್ಟನ್ ಸುಂದರ್ ಖುಷಿ ವ್ಯಕ್ತಪಡಿಸಿದ್ದಾರೆ.
ಆಲ್ರೌಂಡರ್ ವಾಷಿಂಗ್ಟನ್, ಮುಂಬರುವ ಶ್ರೀಲಂಕಾ ಎದುರಿನ ಟಿ–20 ಕ್ರಿಕೆಟ್ ಸರಣಿಗೆ ಮೊದಲ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
‘ಎಳವೆಯಿಂದಲೂ ಭಾರತ ಸೀನಿಯರ್ ತಂಡದಲ್ಲಿ ಆಡಬೇಕೆಂಬ ಹೆಬ್ಬಯಕೆ ಹೊಂದಿದ್ದೆ. ಈ ಕನಸು ಈಗ ಸಾಕಾರಗೊಂಡಿದೆ. ಯೊ ಯೊ ಫಿಟ್ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣನಾದಾಗ ತುಂಬಾ ನೋವಾಗಿತ್ತು. ಹೀಗಿದ್ದರೂ ಛಲ ಬಿಡದೆ ಕಠಿಣ ಪರಿಶ್ರಮ ನಡೆಸಿದೆ. ಅದರ ಪ್ರತಿಫಲ ಈಗ ಸಿಕ್ಕಿದೆ’ ಎಂದಿದ್ದಾರೆ.
ಎಡಗೈ ಬ್ಯಾಟ್ಸ್ಮನ್ ಮತ್ತು ಆಫ್ ಸ್ಪಿನ್ನರ್ ಆಗಿರುವ ವಾಷಿಂಗ್ಟನ್, ಈ ವರ್ಷ ತಮಿಳುನಾಡು ತಂಡ ವಿಜಯ್ ಹಜಾರೆ ಮತ್ತು ದೇವಧರ್ ಟ್ರೋಫಿಗಳಲ್ಲಿ ಪ್ರಶಸ್ತಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಐಪಿಎಲ್ನಲ್ಲಿ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ತಂಡದಲ್ಲೂ ಆಡಿ ಸೈ ಎನಿಸಿಕೊಂಡಿದ್ದರು.
‘ಹೋದ ವರ್ಷ ಬಾಂಗ್ಲಾದೇಶದಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್ನಲ್ಲಿ ವಾಷಿಂಗ್ಟನ್ ಅತ್ಯುತ್ತುಮ ಸಾಮರ್ಥ್ಯ ತೋರಿದ್ದ. ವೆಸ್ಟ್ ಇಂಡೀಸ್ ವಿರುದ್ಧದ ಫೈನಲ್ನಲ್ಲಿ 9 ಓವರ್ ಬೌಲ್ ಮಾಡಿ 18 ರನ್ಗಳನ್ನು ಮಾತ್ರ ಕೊಟ್ಟಿದ್ದ. ಜೊತೆಗೆ ಐಪಿಎಲ್ನಲ್ಲೂ ಮಿಂಚಿದ್ದ. ಹೀಗಾಗಿ ಆಯ್ಕೆ ಸಮಿತಿ ಆತನ ಮೇಲೆ ಒಲವು ತೋರಿದೆ’ ಎಂದು ವಾಷಿಂಗ್ಟನ್ ಅವರ ತಂದೆ ಸುಂದರ್ ಸಂತಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.