ಚೆನ್ನೈ: ಚೆನ್ನೈನ ಕೇಂದ್ರ ರೈಲು ನಿಲ್ದಾಣದಲ್ಲಿ ಗುರುವಾರ ಹಳದಿ ಬಣ್ಣವೇ ಕಂಗೊಳಿಸುತ್ತಿತ್ತು. ಇದಕ್ಕೆ ಕಾರಣ, ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ) ತಂಡ. ರಾಜಸ್ಥಾನ ರಾಯಲ್ಸ್ ವಿರುದ್ಧ ತಾನು ಶುಕ್ರವಾರ ಆಡುವ ಕ್ರಿಕೆಟ್ ಪಂದ್ಯವನ್ನು ವಿಕ್ಷಿಸಲು ಅಭಿಮಾನಿಗಳನ್ನು ಪುಣೆಗೆ ಕರೆತರಲು ಚೆನ್ನೈ ತಂಡ ‘ವಿಷಲ್ಪೋಡು ಎಕ್ಸ್ಪ್ರೆಸ್’ ಎಂಬ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.
ಹಾಗಾಗಿ ನೂರಾರು ಅಭಿಮಾನಿಗಳು ಸಿಎಸ್ಕೆ ತಂಡದ ಹಳದಿ ಜರ್ಸಿ ತೊಟ್ಟು ಚೆನ್ನೈನಿಂದ ರೈಲುಯಾನ ಆರಂಭಿಸಿದ್ದಾರೆ.
ಚೆನ್ನೈ ತಂಡದ ಆಟಗಾರರನ್ನು ಹುರಿದುಂಬಿಸಲು ಈ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿರುವ ಅಭಿಮಾನಿಗಳು ಪಂದ್ಯ ವಿಕ್ಷಿಸಲು ಉಚಿತ ಪಾಸ್ ಮತ್ತು ಊಟ, ವಸತಿಯ ವ್ಯವಸ್ಥೆಯನ್ನು ಸಿಎಸ್ಕೆ ತಂಡವೇ ಮಾಡಿದೆ.
ಕಾವೇರಿ ನದಿ ನೀರು ಹಂಚಿಕೆಯ ನಿರ್ವಹಣಾ ಮಂಡಳಿ ರಚಿಸುವ ಕುರಿತು ತಮಿಳುನಾಡಿನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಅದರ ಬಿಸಿ ಐಪಿಎಲ್ ಪಂದ್ಯಗಳಿಗೂ ತಟ್ಟಿತ್ತು. ಹಾಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ತವರು ನೆಲದಲ್ಲಿ ಆಡಬೇಕಾದ ಪಂದ್ಯಗಳನ್ನು ಐಪಿಎಲ್ ವ್ಯವಸ್ಥಾಪನಾ ಮಂಡಳಿ ಪುಣೆಗೆ ಸ್ಥಳಾಂತರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.