ಬೆಂಗಳೂರು: ಉದ್ಯಾನನಗರಿಯಲ್ಲಿ ಕ್ರಿಕೆಟ್ ಚಟುವಟಿಕೆ ಮತ್ತೆ ರಂಗು ಪಡೆದಿದೆ. ಭಾರತ ‘ಎ’ ಮತ್ತು ವೆಸ್ಟ್ ಇಂಡೀಸ್ ‘ಎ’ ನಡುವಿನ ಮೂರು ಏಕದಿನ ಮತ್ತು ಒಂದು ಟ್ವೆಂಟಿ–20 ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜುಗೊಳ್ಳುತ್ತಿದೆ. ಮೇ ತಿಂಗಳಲ್ಲಿ ಇಲ್ಲಿನ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ನಡೆದಿದ್ದವು. ಮೂರು ತಿಂಗಳ ನಂತರ ನಗರದಲ್ಲಿ ಕ್ರಿಕೆಟ್ ಪಂದ್ಯಗಳು ಆಯೋಜನೆಯಾಗಿವೆ.
ಈ ವರ್ಷದ ಜನವರಿಯಲ್ಲಿ ಯುವರಾಜ್ ಸಿಂಗ್ ಕೊನೆಯ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ್ದರು. ಮತ್ತೆ ಈಗ ಅವರು ಬ್ಯಾಟ್ ಹಿಡಿಯಲು ಸಜ್ಜಾಗಿದ್ದಾರೆ. ಉತ್ತಮ ಪ್ರದರ್ಶನ ತೋರಬೇಕೆನ್ನುವ ಹೆಬ್ಬಯಕೆ ಹೊಂದಿರುವ ‘ಯುವಿ’ ಗುರುವಾರ ಎನ್ಸಿಎನಲ್ಲಿ ಅಭ್ಯಾಸ ನಡೆಸಿದರು. ಯುವರಾಜ್ ನಾಯಕತ್ವದಲ್ಲಿ ಭಾರತ ‘ಎ’ ತಂಡ ಏಕದಿನ ಪಂದ್ಯಗಳನ್ನು ಆಡಲಿದೆ.
ಕರ್ನಾಟಕದ ರಾಬಿನ್ ಉತ್ತಪ್ಪ ಕೂಡಾ ತಂಡದಲ್ಲಿದ್ದಾರೆ. ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಲು ಯುವ ಹಾಗೂ ಅನುಭವಿ ಆಟಗಾರರಿಗೆ ಈ ಸರಣಿ ವೇದಿಕೆಯಾಗಿದೆ.
ಮೂರು ಪಂದ್ಯಗಳ ಸರಣಿಯ ನಂತರ ನಾಲ್ಕು ದಿನಗಳ ಪಂದ್ಯಗಳು ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣ, ಶಿವಮೊಗ್ಗದ ಜೆಎನ್ಎನ್ಸಿಇ ಕ್ರೀಡಾಂಗಣ ಮತ್ತು ಹುಬ್ಬಳ್ಳಿಯ ರಾಜನಗರ ಕ್ರೀಡಾಂಗಣದಲ್ಲಿ ಆಯೋಜನೆಯಾಗಿವೆ. ಎಲ್ಲಾ ಕ್ರೀಡಾಂಗಣಗಳಲ್ಲಿ ಉಚಿತ ಪ್ರವೇಶ ಇರುವ ಕಾರಣ ಕ್ರಿಕೆಟ್ ಪ್ರೇಮಿಗಳು ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲು ಅವಕಾಶ ಲಭಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.