ನವದೆಹಲಿ: ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ 19 ವರ್ಷದೊಳಗಿನವರ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ತಂಡವನ್ನು ಪ್ರಕಟಿಸಲಾಗಿದೆ. ಸಮಿತಿಯ ಆಶಿಶ್ ಕಪೂರ್, ಗ್ಯಾನೇಂದ್ರ ಪಾಂಡೆ ಮತ್ತು ರಾಕೇಶ್ ಪಾರಿಕ್ ಅವರು ಹಾಜರಿದ್ದರು.
ತಂಡವು ಇದೇ ತಿಂಗಳು ಶ್ರೀಲಂಕಾ ವಿರುದ್ಧ ನಾಲ್ಕು ದಿನಗಳ ಎರಡು ಪಂದ್ಯಗಳನ್ನು ಆಡಲಿದೆ. ಅನುಜ್ ರಾವತ್ ಮತ್ತು ಆರ್ಯನ್ ಜುಯಾಲ್ ತಲಾ ಒಂದು ಪಂದ್ಯದಲ್ಲಿ ನಾಯಕತ್ವ ವಹಿಸುವರು.
18 ವರ್ಷದ ಅರ್ಜುನ್ ಎಡಗೈ ಮಧ್ಯಮವೇಗಿ ಮತ್ತು ಕೆಳಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದಾರೆ. 6.1 ಅಡಿ ಎತ್ತರವಿದ್ದಾರೆ. ಈಚೆಗೆ ನಡೆದಿದ್ದ ಕೂಚ್ ಬೆಹರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅರ್ಜುನ್ ಅವರು ಒಟ್ಟು 18 ವಿಕೆಟ್ಗಳನ್ನು ಗಳಿಸಿದ್ದರು. ಟೂರ್ನಿಯಲ್ಲಿ ಆವರು ಹೆಚ್ಚು ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ 43 ನೇ ಸ್ಥಾನ ಪಡೆದಿದ್ದರು.
ಆದರೆ, ಇದೇ ಟೂರ್ನಿಯಲ್ಲಿ 50 ವಿಕೆಟ್ಗಳನ್ನು ಗಳಿಸಿದ್ದ ಹಿಮಾಚಲ ಪ್ರದೇಶದ ಆಯುಷ್ ಜಮಾವಲ್ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿಲ್ಲ.
ಸಚಿನ್ ಸಂತಸ: ಅರ್ಜುನ್ಗೆ ತಂಡದಲ್ಲಿ ಸ್ಥಾನ ಲಭಿಸಿರುವುದರ ಬಗ್ಗೆ ಸಚಿನ್ ತೆಂಡೂಲ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ. ‘ಟೂರ್ನಿಯಲ್ಲಿ ಅರ್ಜುನ್ ಉತ್ತಮವಾಗಿ ಆಡುವ ಭರವಸೆ ಇದೆ’ ಎಂದಿದ್ದಾರೆ.
ಅರ್ಜುನ್ ಅವರಿಗೆ ಹಿರಿಯ ಕೋಚ್ ಸುಬ್ರತೊ ಬ್ಯಾನರ್ಜಿ ತರಬೇತಿ ನೀಡಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.