ನಾಗಪುರ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಚೊಚ್ಚಲ ಪ್ರಶಸ್ತಿ ಗೆದ್ದ ವಿದರ್ಭ ತಂಡ ಬುಧವಾರ ಆರಂಭವಾಗಲಿರುವ ಇರಾನಿ ಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಇತರೆ ತಂಡವನ್ನು ಎದುರಿಸಲಿದೆ.
ಮಯಂಕ್ ಅಗರವಾಲ್, ಪೃಥ್ವಿ ಶಾ, ರವಿಚಂದ್ರನ್ ಅಶ್ವಿನ್ ಮುಂತಾದವರನ್ನು ಒಳಗೊಂಡ ಭಾರತ ಇತರೆ ತಂಡಕ್ಕೆ ಕರುಣ್ ನಾಯರ್ ನಾಯಕ. ಹೀಗಾಗಿ ಪಂದ್ಯ ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ರಣಜಿ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ಮೆರೆದಿರುವ ಆಟಗಾರರೂ ಈ ತಂಡದಲ್ಲಿದ್ದಾರೆ.
ಭಾರತ ತಂಡದ ಆಯ್ಕೆ ಸಮಿತಿಯ ಗಮನ ಸೆಳೆಯಲು ಇವರಿಗೆ ಈ ಪಂದ್ಯದಲ್ಲಿ ಉತ್ತಮ ಅವಕಾಶ ಒದಗಿದೆ. ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಭಾರತ ‘ಎ’ ತಂಡದಲ್ಲಿ ಸ್ಥಾನ ಗಳಿಸುವುದಕ್ಕೂ ಈ ಪಂದ್ಯ ಉತ್ತಮ ಅವಕಾಶ ಒದಗಿಸಲಿದೆ.
ಭಾರತ ಇತರೆ ತಂಡದಲ್ಲಿ ಉತ್ತಮ ಬೌಲರ್ಗಳ ಬಳಗವೂ ಇದೆ. ವೇಗಿ ನವದೀಪ್ ಸೈನಿ ಮತ್ತು ರವಿಚಂದ್ರನ್ ಅಶ್ವಿನ್ ಮೇಲೆ ತಂಡ ಭರವಸೆ ಇರಿಸಿದೆ.
ರಣಜಿ ಟ್ರೋಫಿಯಲ್ಲಿ ಸಂಚಲನ ಸೃಷ್ಟಿಸಿದ್ದ ರಜನೀಶ್ ಗುರುಬಾನಿ ಮತ್ತೊಮ್ಮೆ ಮಿಂಚು ಹರಿಸಲು ಸಜ್ಜಾಗಿದ್ದಾರೆ. ಅನುಭವಿ ವೇಗಿ ಉಮೇಶ್ ಯಾದವ್ ತಂಡದ ಭರವಸೆ ಹೆಚ್ಚಿಸಿದ್ದಾರೆ. ಆರಂಭಿಕ ಜೋಡಿ ಫೈಜ್ ಫಜಲ್ ಮತ್ತು ಸಂಜಯ್ ರಾಮಸ್ವಾಮಿ, ಅತಿಹೆಚ್ಚು ಇರಾನಿ ಕಪ್ ಪಂದ್ಯಗಳನ್ನು ಆಡಿರುವ ವಾಸೀಂ ಜಾಫರ್ ನೇತೃತ್ವದ ಬ್ಯಾಟಿಂಗ್ ಪಡೆ ವಿದರ್ಭ ತಂಡದ ಶಕ್ತಿ.
ಪಂದ್ಯ ಆರಂಭ: ಬೆಳಿಗ್ಗೆ 9.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.