ನವದೆಹಲಿ (ಪಿಟಿಐ): ಆಲ್ ಇಂಡಿಯಾ ರೇಡಿಯೊ(ಎಐಆರ್)ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಕ್ರಿಕೆಟ್ ಪಂದ್ಯಗಳ ವೀಕ್ಷಕ ವಿವರಣೆಯ ನೇರ ಪ್ರಸಾರಕ್ಕೆ ಅವಕಾಶ ನೀಡುವುದಿಲ್ಲವೆಂದು ಪ್ರಸಾರ ಹಕ್ಕು ಹೊಂದಿರುವ ನಿಂಬಸ್ ಕಮ್ಯೂನಿಕೇಷನ್ಸ್ ಪಟ್ಟು ಹಿಡಿದಿದೆ.
ಆದರೆ ಇದನ್ನು ಆಕ್ಷೇಪಿಸಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎಐಆರ್ನಲ್ಲಿ ಪಂದ್ಯದ ವೀಕ್ಷಕ ವಿವರಣೆಯ ನೇರ ಪ್ರಸಾರಕ್ಕೆ ಯಾವುದೇ ತೊಡಕಾಗದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪಂದ್ಯದ ವೀಕ್ಷಕ ವಿವರಣೆ ಪ್ರಸಾರಕ್ಕೆ ಅವಕಾಶ ನೀಡಲು ಜಾಹೀರಾತು ಆದಾಯದ ಅರ್ಧ ಮೊತ್ತವನ್ನು ತನಗೆ ನೀಡಬೇಕೆಂದು ನಿಂಬಸ್ ಕೇಳಿದೆ. ಆದರೆ ಇದಕ್ಕೆ ಎಐಆರ್ ಒಪ್ಪುತ್ತಿಲ್ಲ.
ಹಾಕಿ: ಐಟಿಐ ತಂಡಕ್ಕೆ ಜಯ
ಬೆಂಗಳೂರು: ಸುದೀಪ್ ಮತ್ತು ಪ್ರತೀಕ್ ತೋರಿದ ಉತ್ತಮ ಪ್ರದರ್ಶನದ ನೆರವಿನಿಂದ ಐಟಿಐ ತಂಡ ಇಲ್ಲಿ ನಡೆಯುತ್ತಿರುವ ಬಿಇಎಲ್ ಕ್ಲಬ್ ಆಶ್ರಯದ 33ನೇ ರಾಜ್ಯಮಟ್ಟದ `ಕೊಡವ ಕಪ್~ ಹಾಕಿ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು.
ಸೋಮವಾರ ನಡೆದ ಪಂದ್ಯದಲ್ಲಿ ಐಟಿಐ 6-2 ಗೋಲುಗಳಿಂದ ಆರ್ಬಿಐ ತಂಡವನ್ನು ಮಣಿಸಿತು. ಸುದೀಪ್ (24 ಮತ್ತು 39ನೇ ನಿಮಿಷ) ಹಾಗೂ ಪ್ರತೀಕ್ (37, 53ನೇ ನಿ.) ತಲಾ ಎರಡು ಗೋಲುಗಳನ್ನು ತಂದಿತ್ತರು. ಇನ್ನೆರಡು ಗೋಲುಗಳನ್ನು ಪೀಟರ್ (43) ಮತ್ತು ಸೋಮಯ್ಯ (49) ಗಳಿಸಿದರು.
ಆರ್ಬಿಐ ಪರ ದರ್ಶನ್ (44) ಹಾಗೂ ತನು ನಂಜಪ್ಪ (54) ಚೆಂಡನ್ನು ಗುರಿಸೇರಿಸಿದರು. ಮತ್ತೊಂದು ಪಂದ್ಯದಲ್ಲಿ ಬೆಳಗಾವಿಯ ಎಂಎಲ್ಐ 2-1 ಗೋಲುಗಳಿಂದ ಕೆಎಸ್ಪಿ ತಂಡವನ್ನು ಸೋಲಿಸಿತು. ಅಮೋಲ್ ಪಾಟೀಲ್ (19) ಮತ್ತು ರೋಶನ್ (50) ಎಂಎಲ್ಐ ತಂಡದ ಗೆಲುವಿಗೆ ಕಾರಣರಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.