ADVERTISEMENT

ಎಚ್‌ಎಎಲ್ ಎದುರಾಳಿ ಆ್ಯರೋಸ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2011, 19:00 IST
Last Updated 2 ಏಪ್ರಿಲ್ 2011, 19:00 IST
ಎಚ್‌ಎಎಲ್ ಎದುರಾಳಿ ಆ್ಯರೋಸ್
ಎಚ್‌ಎಎಲ್ ಎದುರಾಳಿ ಆ್ಯರೋಸ್   

ಬೆಂಗಳೂರು: ತವರು ನೆಲದ ಪ್ರೇಕ್ಷಕರ ಬೆಂಬಲವನ್ನು ಹೊಂದಿರುವ ಹಿಂದೂಸ್ಥಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ ತಂಡ ಭಾನುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಐ-ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಇಂಡಿಯನ್ ಅ್ಯರೋಸ್ ತಂಡದ ಸವಾಲನ್ನು ಎದುರಿಸಲಿದೆ.

ಇದೇ ಟೂರ್ನಿಯ ಕಳೆದ ಪಂದ್ಯದಲ್ಲಿ ಚಿರಾಗ್ ಯುನೈಟೆಡ್ ಹಾಗೂ ಅದಕ್ಕೂ ಮುನ್ನ ವಿವಾ ಕೇರಳ ಎದುರು ಸೋಲು ಕಂಡಿರುವ ಆತಿಥೇಯ ತಂಡಕ್ಕೆ ಪದೇ ಪದೇ ಸೋಲಿನ ನಿರಾಸೆ ಕಾಡುತ್ತಿದೆ. ನಿರಾಸೆಯ ನಡುವೆಯು ಗೆಲುವಿನ ತುಡಿತ ಹೊಂದಿರುವ ಎಚ್‌ಎಎಲ್ ತಂಡ ಆಟಗಾರರ ಗಾಯದ ಸಮಸ್ಯೆಯಿಂದ ಬಳಲುತ್ತಿದೆ.

ಐ ಲೀಗ್ ಟೂರ್ನಿಯಲ್ಲಿ ಇದುವರೆಗೂ ಆಡಿರುವ ಒಟ್ಟು 19 ಪಂದ್ಯಗಳಲ್ಲಿ ಕೇವಲ ಐದರಲ್ಲಿ ಮಾತ್ರ ಆತಿಥೇಯ ತಂಡದವರು ಗೆಲುವು ಪಡೆದಿದ್ದಾರೆ. ಉಳಿದ ಐದು ಪಂದ್ಯಗಳನ್ನು ಡ್ರಾ ಮಾಡಿಕೊಂಡರೆ, ಒಂಬತ್ತು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. ಐದು ಗೆಲುವು ಹಾಗೂ ಒಂಬತ್ತು ಡ್ರಾ ಗಳಿಂದ ಒಟ್ಟು 20 ಪಾಯಿಂಟುಗಳನ್ನು ಹೊಂದಿದೆ. ತವರು ನೆಲದ ತಂಡಕ್ಕೆ ಎದುರಾಳಿಯಾಗಿರುವ ಇಂಡಿಯನ್ ಆ್ಯರೋಸ್ 18 ಪಂದ್ಯಗಳನ್ನಾಡಿದ್ದು, ನಾಲ್ಕರಲ್ಲಿ ಗೆಲುವು ಪಡೆದಿದೆ. ಏಳು ಡ್ರಾ ಹಾಗೂ ಏಳು  ಪಂದ್ಯಗಳಲ್ಲಿ ಸೋಲು ಕಂಡಿದೆ. ಒಟ್ಟು 19 ಪಾಯಿಂಟ್‌ಗಳನ್ನು ಗಳಿಸಿದೆ.

‘ಸ್ನಾಯು ಸೆಳೆತದ ತೊಂದರೆಯಿಂದ ಬಳಲುತ್ತಿದ್ದ ಎಚ್‌ಎಎಲ್‌ನ ಮಾಜಿ ನಾಯಕ ಕ್ಸೇವಿಯರ್ ವಿಜಯ್‌ಕುಮಾರ್ ಈಗ ಚೇತರಿಸಿಕೊಂಡಿದ್ದು, ಭಾನುವಾರದ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ವಿಜಯ್ ಕುಮಾರ್ ವಿವಾ ಕೇರಳ ವಿರುದ್ಧದ ಪಂದ್ಯದಲ್ಲಿ  ಆಡಿರಲಿಲ್ಲ. ಆದರೆ ರಕ್ಷಣಾತ್ಮಕತೆಗೆ ಹೆಚ್ಚು ಒತ್ತು ನೀಡುವ ಜೋಸೆಫ್ ಸೆಮಿ ಹಾಗೂ ರೋಹಿತ್ ಚಂದ್ ಅವರು ಭಾನುವಾರದ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

‘ತಂಡದಲ್ಲಿ ಗಾಯದ ಸಮಸ್ಯೆಯಿದ್ದರೂ ಆತ್ಮ ವಿಶ್ವಾಸದಿಂದಲೇ ಇಂಡಿಯನ್ ಆ್ಯರೋಸ್‌ನ ಸವಾಲನ್ನು ಎದುರಿಸಲಿದ್ದೇವೆ. ಅದಕ್ಕಾಗಿ ನಮ್ಮ ತಂಡದ ಆಟಗಾರರು ಸಜ್ಜಾಗಿದ್ದಾರೆ’ ಎಂದು ಎಚ್‌ಎಎಲ್ ತಂಡದ ಮ್ಯಾನೇಜರ್ ಮುರಳೀಧರನ್ ತಿಳಿಸಿದ್ದಾರೆ.

‘ಎಎಫ್‌ಸಿ ಚಾಲೆಂಜ್ ಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿರುವ ನಮ್ಮ ತಂಡದ ಕೆಲ ಆಟಗಾರರು ವಿಶ್ವಾಸದಿಂದಿದ್ದಾರೆ. ಜೆಜೆ ಲಾಲ್ಪೆ ಕ್ಲುವಾ ಹೆಚ್ಚು ಗೋಲು ಗಳಿಸುವತ್ತ ಗಮನ ಹರಿಸುತ್ತಾರೆ. ಅವರ ತಂಡದ ಬಲವನ್ನು ಹೆಚ್ಚಿಸಿದ್ದಾರೆ. ಐ ಲೀಗ್‌ನಲ್ಲಿಯೂ ಒಟ್ಟು ಎಂಟು ಗೋಲುಗಳನ್ನು ಜೆಜೆ ಗಳಿಸಿದ್ದಾರೆ’ ಎಂದು ಇಂಡಿಯನ್ ಆ್ಯರೋಸ್ ತಂಡದ ಕೋಚ್ ದೇಶ್‌ಮಂದ್ ಬುಲ್ಪಿನ್ ಹೇಳಿದರು.
(ಪಂದ್ಯದ ಆರಂಭ: ಸಂಜೆ 4.00ಗಂಟೆಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.