ADVERTISEMENT

ಎನ್‌ಸಿಎನಲ್ಲಿ ಸಚಿನ್ ಅಭ್ಯಾಸ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2012, 19:30 IST
Last Updated 15 ಆಗಸ್ಟ್ 2012, 19:30 IST
ಎನ್‌ಸಿಎನಲ್ಲಿ ಸಚಿನ್ ಅಭ್ಯಾಸ
ಎನ್‌ಸಿಎನಲ್ಲಿ ಸಚಿನ್ ಅಭ್ಯಾಸ   

ಬೆಂಗಳೂರು: `ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಇದು ನಮ್ಮೆಲ್ಲರ ಪಾಲಿಗೆ ಮಹತ್ವಪೂರ್ಣ ದಿನ. ಸುಧಾರಣೆ ಕಾಣುತ್ತಾ ಮುನ್ನುಗ್ಗೋಣ~ -ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಅಭ್ಯಾಸ ನಡೆಸಲು ಬುಧವಾರ ಉದ್ಯಾನ ನಗರಿಗೆ ಆಗಮಿಸಿರುವ ಸಚಿನ್ ತೆಂಡೂಲ್ಕರ್ ಹೇಳಿದ ಮಾತಿದು.

ಇಡೀ ದೇಶ ರಜೆಯ ಮೂಡಿನಲ್ಲಿದ್ದರೆ ಇತ್ತ ಬ್ಯಾಟಿಂಗ್ ಚಾಂಪಿಯನ್ ಸಚಿನ್ ಎನ್‌ಸಿಎನಲ್ಲಿ ಕಠಿಣ ಅಭ್ಯಾಸ ನಡೆಸುವುದರಲ್ಲಿ ತಲ್ಲೆನರಾಗಿದ್ದರು. ನ್ಯೂಜಿಲೆಂಡ್ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಮುಂಬರುವ ಟೆಸ್ಟ್ ಕ್ರಿಕೆಟ್ ಸರಣಿಗೆ ಸಿದ್ಧರಾಗಲು ಅವರು ಇಲ್ಲಿಗೆ ಆಗಮಿಸಿದ್ದಾರೆ.

ಮಧ್ಯಾಹ್ನ 1.30ಕ್ಕೆ ಆಗಮಿಸಿದ ಸಚಿನ್ ತುಂಬಾ ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಅವರಿಗೆ ಜಹೀರ್ ಖಾನ್ ಬೌಲ್ ಮಾಡಿದರು. ಫಿಟ್‌ನೆಸ್ ಕಂಡುಕೊಳ್ಳಲು ಎಡಗೈ ವೇಗಿ ಜಹೀರ್ ಕೆಲ ದಿನಗಳಿಂದ ಎನ್‌ಸಿಎನಲ್ಲಿದ್ದಾರೆ. ಸ್ಥಳೀಯ ಬೌಲರ್ ಡೇವಿಡ್ ಮಥಾಯಿಸ್ ಕೂಡ ಬೌಲ್ ಮಾಡಿದರು. ಮಥಾಯಿಸ್‌ಗೆ ಸಚಿನ್  ಸಲಹೆಗಳನ್ನೂ ನೀಡಿದರು. ಎನ್‌ಸಿಎ ಬ್ಯಾಟಿಂಗ್ ಕೋಚ್ ದಿನೇಶ್ ನಾನಾವತಿ ಕೂಡ ಇದ್ದರು.

ಎನ್‌ಸಿಎನಲ್ಲಿರುವ ರಾಘವೇಂದ್ರ ಅವರ ನೆರವನ್ನೂ ಸಚಿನ್ ಬಳಸಿಕೊಂಡರು. ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ತೆಂಡೂಲ್ಕರ್ ತಮ್ಮ ಜೊತೆ ರಘು ಅವರನ್ನು ಕರೆದುಕೊಂಡು ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು. ರಘು 20 ನಿಮಿಷ ಸಚಿನ್ ಅವರಿಗೆ ನೆಟ್ಸ್‌ನಲ್ಲಿ ಚೆಂಡನ್ನು ಎಸೆದರು. ತೆಂಡೂಲ್ಕರ್ ಮೂರು ದಿನ ಇಲ್ಲಿ ಅಭ್ಯಾಸ ನಡೆಸಲಿದ್ದಾರೆ. ಬಳಿಕ ಹೈದರಾಬಾದ್‌ಗೆ ತೆರಳಲಿದ್ದಾರೆ.

ಇಂಗ್ಲೆಂಡ್ ವಿರುದ್ಧ ಸಚಿನ್ 1990ರ ಆಗಸ್ಟ್ 14ರಂದು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಅದೊಂದು ಸ್ಮರಣೀಯ ಕ್ಷಣ~ ಎಂದರು.

ಕಿವೀಸ್ ಬಳಗದ ಎದುರಿನ ಮೊದಲ ಟೆಸ್ಟ್ ಆಗಸ್ಟ್ 23ರಂದು ಹೈದರಾಬಾದ್‌ನಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್ ಬೆಂಗಳೂರಿನಲ್ಲಿ ಆ. 31ರಂದು ಶುರುವಾಗಲಿದೆ. ಬಳಿಕ ಎರಡು ಟ್ವೆಂಟಿ-20 ಪಂದ್ಯಗಳು ಜರುಗಲಿವೆ. ಸೆಪ್ಟೆಂಬರ್ 8ರಂದು ವಿಶಾಖಪಟ್ಟಣ ಹಾಗೂ ಸೆ.11ರಂದು ಚೆನ್ನೈನಲ್ಲಿ ಈ ಪಂದ್ಯಗಳು ನಡೆಯಲಿವೆ.

ಶುಕ್ರವಾರ ಯುವಿ ಆಗಮನ: ಶ್ರೀಲಂಕಾದಲ್ಲಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಯುವರಾಜ್ ಸಿಂಗ್ ಶುಕ್ರವಾರ ಎನ್‌ಸಿಎಗೆ ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಅವರು ಫಿಟ್‌ನೆಸ್ ಸಾಬೀತುಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.