ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಂಗಾಮಿ ಪದಾಧಿಕಾರಿಗಳು ಮತ್ತು ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ನಡುವಿನ ಶೀತಲ ಸಮರ ಮುಂದುವರೆದಿದೆ.
ಇದೀಗ ಭ್ರಷ್ಟಾಚಾರ ತಡೆ ಘಟಕದ (ಎಸಿಯು) ನೂತನ ಮುಖ್ಯಸ್ಥ ಅಜಿತ್ ಸಿಂಗ್ ಅವರ ನೇಮಕಕ್ಕೆ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರ ಅಭಿಪ್ರಾಯವನ್ನೂ ಕೇಳದೇ ಸಿಒಎ ಒಪ್ಪಿಗೆ ಸೂಚಿಸಿದೆ. ಅಜಿತ್ ಸಿಂಗ್ ಅವರ ನೇಮಕಪತ್ರಕ್ಕೆ ಸಹಿ ಹಾಕಲು ಚೌಧರಿ ಅವರು ಒಪ್ಪಿರಲಿಲ್ಲ. ಎಸಿಯು ಮುಖ್ಯಸ್ಥರಾಗಿದ್ದ ನೀರಜ್ ಕುಮಾರ್ ಅವರ ಅವಧಿಯು ಶನಿವಾರ ಮುಕ್ತಾಯವಾಯಿತು. ಆದರೆ ಐಪಿಎಲ್ ಟೂರ್ನಿಯು ಮುಗಿಯುವವರೆಗೂ ಅವರು ಅಜಿತ್ ಸಿಂಗ್ ಜೊತೆಗೆ ಕಾರ್ಯನಿರ್ವಹಿಸಲಿದ್ದಾರೆ.
ಮಂಡಳಿಯ ಆಡಳಿತ ವಿಭಾಗದ ಪ್ರಧಾನ ವ್ಯವಸ್ಥಾಪಕ ರತ್ನಾಕರ್ ಶೆಟ್ಟಿ ಅವರ ಅಧಿಕಾರ ಅವಧಿಯ ವಿಸ್ತರಣೆಗೆ ಅಮಿತಾಭ್ ಚೌಧರಿ ಅವರು ಸಲ್ಲಿಸಿದ್ದ ಪ್ರಸ್ತಾವವನ್ನು ಸಿಒಎ ಮುಖ್ಯಸ್ಥ ವಿನೋದ್ ರಾಯ್ ತಿರಸ್ಕರಿಸಿದ್ದರು. ಇದರಿಂದಾಗಿ ಚೌಧರಿ ಅವರು ಅಜಿತ್ ಸಿಂಗ್ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆ ಜಗ್ಗದ ಸಿಒಎ ನೇಮಕಕ್ಕೆ ಹಸಿರು ನಿಶಾನೆ ತೋರಿಸಿದೆ.
ಮಾರ್ಚ್ 15ರಂದು ಬಿಸಿಸಿಐ ಪದಾಧಿಕಾರಿಗಳ ಅಧಿಕಾರವನ್ನು ಸಿಒಎ ಮೊಟಕುಗೊಳಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.