
ಮೀರ್ಪುರ (ಢಾಕಾ): ಗೆಲುವಿನ ಮೊದಲ ಹೆಜ್ಜೆಯಿಟ್ಟು ಹುಮ್ಮಸ್ಸು ಹೆಚ್ಚಿಸಿಕೊಂಡ ಭಾರತ ತಂಡವು ಅಜೇಯವಾಗಿಯೇ ಉಳಿದು ಏಷ್ಯಾಕಪ್ ಕ್ರಿಕೆಟ್ನಲ್ಲಿ ಫೈನಲ್ ತಲುಪುವ ಕನಸು ಕಂಡಿದೆ.
ಕಂಡ ಕನಸು ನನಸಾಗಿಸಿಕೊಳ್ಳಲು ಆತಿಥೇಯ ಬಾಂಗ್ಲಾದೇಶ ವಿರುದ್ಧ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ವಿಶ್ವಾಸ ಇಮ್ಮಡಿಯಾಗುವಂಥ ಜಯ ಪಡೆಯಬೇಕು. ಆ ಭರವಸೆಯಂತೂ ನಾಯಕ ಮಹೇಂದ್ರ ಸಿಂಗ್ ದೋನಿಗೆ ಇದೆ.
ಶ್ರೀಲಂಕಾ ತಂಡವನ್ನು ಐವತ್ತು ರನ್ಗಳ ಅಂತರದಿಂದ ಮಣಿಸಿದ `ಮಹಿ~ ಬಳಗವು ಅದೇ ಅಬ್ಬರದೊಂದಿಗೆ ಮುನ್ನುಗ್ಗಲು ಸಜ್ಜಾಗಿದೆ. ಅನುಭವಿ ಸಚಿನ್ ತೆಂಡೂಲ್ಕರ್ ನೀರಿಗೆ ಅದ್ದಿದ ಪಟಾಕಿ ಆಗಿದ್ದರೂ, ವಿರಾಟ್ ಕೊಹ್ಲಿಯಂತ ಯುವಕರು ಶತಕ ಸಿಡಿಸಿ ಮಿಂಚಿರುವುದರಿಂದ ನಾಯಕನ ಚಿಂತೆಯೂ ದೂರ. ಗೌತಮ್ ಗಂಭೀರ್ ಕೂಡ ಲಂಕಾ ಎದುರು ನೂರರ ಗಂಟು ಕಟ್ಟಿದ್ದರಿಂದ ದೊಡ್ಡ ಮೊತ್ತ ಗಳಿಸುವುದು ಕಷ್ಟವೆಂದು ಅನುಮಾನ ಪಡುವ ಅಗತ್ಯವೂ ಇಲ್ಲ.
ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಸತತ 33 ಇನಿಂಗ್ಸ್ಗಳಲ್ಲಿ ಶತಕದ ನಿರೀಕ್ಷೆಯನ್ನು ಹುಸಿಯಾಗಿಸಿರುವ ತೆಂಡೂಲ್ಕರ್ ಅವರ ನೂರರ ನೂರು ಸಾಧನೆ ನೋಡುವ ಕಾಲಕ್ಕಾಗಿ ಕಾಯುವುದು ಕ್ರಿಕೆಟ್ ಪ್ರೇಮಿಗಳ ಕಾಯಕವಾಗಿದೆ. ಬಾಂಗ್ಲಾ ವಿರುದ್ಧವಾದರೂ ಆ ಸಾಧನೆ ಮಾಡಿ ಚಿಂತೆ ಕಳೆದುಕೊಂಡರೆ ಸಾಕು ಎನ್ನುವ ಪರಿಸ್ಥಿತಿ ಎದುರಾಗಿದೆ. ಆದರೆ ಸಚಿನ್ ಅಂಥದೊಂದು ಆಟವನ್ನು ಆಡುತ್ತಾರಾ? ಆಡಿದರೆ ಸಂತಸ. ಆದರೆ ತೃಪ್ತಿಯಂತೂ ಆಗದು. ಏಕೆಂದರೆ ಬಾಂಗ್ಲಾದಂಥ ತಂಡದ ಎದುರು ಮಹತ್ವದ ಮೈಲಿಗಲ್ಲು ಮುಟ್ಟಿದ್ದು ಮನವನ್ನು ಕೊರೆಯುವ ಹುಳುವಾಗಬಹುದು!
ಅದೇನೇ ದೋನಿ ತಮ್ಮ ತಂಡದಲ್ಲಿರುವ ಅನುಭವಿಯ ದಾಖಲೆಯ ಬಗ್ಗೆ ಯೋಚನೆ ಮಾಡುತ್ತಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಫೈನಲ್ಗೆ ಅರ್ಹತೆ ಪಡೆಯಲು ಸಾಧ್ಯವಾಗದ ಕಾರಣ ಆದ ನೋವು ಮರೆಯುವುದು ಗುರಿ. ಇಲ್ಲಿ ಪ್ರತಿಯೊಂದು ಪಂದ್ಯದಲ್ಲಿಯೂ ಗೆದ್ದು ಅಜೇಯವಾಗಿ ಅಂತಿಮ ಹಣಾಹಣಿಗೆ ಸಜ್ಜಾಗುವುದು ಅವರ ಆಶಯ. ಎಲ್ಲಕ್ಕಿಂತ ಮುಖ್ಯವಾಗಿ ಭಾನುವಾರ ಪಾಕಿಸ್ತಾನವನ್ನು ಎದುರಿಸಬೇಕು. ಆ ಪಂದ್ಯವನ್ನು ಯುದ್ಧ ಎನ್ನುವಂತೆ ನೋಡುವ ಜನರು ಇರುವುದರಿಂದ ಗೆಲ್ಲಲೇಬೇಕು ಎನ್ನುವ ಒತ್ತಡ. ಆದ್ದರಿಂದ ಮಹತ್ವದ ಆ ಹಣಾಹಣಿಗೆ ಸಿದ್ಧವಾಗಲು ಬಾಂಗ್ಲಾ ವಿರುದ್ಧವೂ ಜಯಿಸಿ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು.
ದೊಡ್ಡ ಮೊತ್ತವನ್ನು ಗಳಿಸುವ ಹಾಗೂ ಗುರಿಯನ್ನು ಮುಟ್ಟುವ ಛಲ ಭಾರತಕ್ಕೆ ಇದೆ. ಬೌಲಿಂಗ್ ಕೂಡ ಬಲವಾಗಿದೆ ಎನ್ನುವುದು ಲಂಕಾ ಎದುರು ನಡೆಸಿದ ದಾಳಿಯಿಂದಲೇ ಸಾಬೀತಾಗಿದೆ. ಪ್ರಬಲ ಸಿಂಹಳೀಯರಿಗೆ ಸೋಲಿನ ಕಹಿ ನೀಡಿದ ದೋನಿ ಪಡೆಗೆ ಬಾಂಗ್ಲಾ ಸುಲಭದ ತುತ್ತಾಗುತ್ತದೆ ಎನ್ನುವುದು ನಿರೀಕ್ಷೆ.
ತಂಡಗಳು: ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್, ಮನೋಜ್ ತಿವಾರಿ, ಸುರೇಶ್ ರೈನಾ, ರವಿಚಂದ್ರನ್ ಅಶ್ವಿನ್, ಅಶೋಕ್ ದಿಂಡಾ, ರವೀಂದ್ರ ಜಡೇಜಾ, ಪ್ರವೀನ್ ಕುಮಾರ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ರಾಹುಲ್ ಶರ್ಮ ಮತ್ತು ಆರ್.ವಿನಯ್ ಕುಮಾರ್.
ಬಾಂಗ್ಲಾದೇಶ: ಮುಶ್ಫಿಕುರ್ ರಹೀಮ್ (ನಾಯಕ), ಅಬ್ದುರ್ ರಜಾಕ್, ಅನಾಮುಲ್ ಹಕ್, ಇಲ್ಯಾಸ್ ಸನ್ನಿ, ಇಮ್ರುಲ್ ಕಯೇಸ್, ಜಹುರುಲ್ ಇಸ್ಲಾಮ್, ಮಹ್ಮುದುಲ್ಲಾ, ಮರ್ಷಫೆ ಮೊರ್ತಜಾ, ನಾಸೀರ್ ಹುಸೇನ್, ನಜೀಮುದ್ದೀನ್, ನಜ್ಮುಲ್ ಹುಸೇನ್, ಶಫಿವುಲ್ ಇಸ್ಲಾಮ್, ಶಹಾದತ್ ಹುಸೇನ್, ಶಕೀಬ್ ಅಲ್ ಹಸನ್ ಮತ್ತು ತಮೀಮ್ ಇಕ್ಬಾಲ್.
ಅಂಪೈರ್ಗಳು: ಇಯಾನ್ ಗೌಲ್ಡ್ (ಇಂಗ್ಲೆಂಡ್) ಮತ್ತು ಪಾಲ್ ರೀಫೆಲ್ (ಆಸ್ಟ್ರೇಲಿಯಾ); ಮೂರನೇ ಅಂಪೈರ್: ರುಚಿರಾ ಪಲ್ಲಿಯಾಗುರುಗೆ (ಶ್ರೀಲಂಕಾ).
ಮ್ಯಾಚ್ರೆಫರಿ: ಡೇವಿಡ್ ಬೂನ್ (ಆಸ್ಟ್ರೇಲಿಯಾ).
ಪಂದ್ಯ ಆರಂಭ: (ಭಾರತೀಯ ಕಾಲಮಾನ) ಮಧ್ಯಾಹ್ನ 1.30ಕ್ಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.