ನವದೆಹಲಿ (ಪಿಟಿಐ): `ಹಲವು ವಿವಾದಗಳ ಮೂಲಕ ಕ್ರಿಕೆಟ್ಗೆ ಕೆಟ್ಟ ಹೆಸರು ತರುತ್ತಿರುವ ಐಪಿಎಲ್ ಟೂರ್ನಿಯನ್ನು ನಿಷೇಧಿಸಬೇಕು~ ಎಂದು ಆಗ್ರಹಿಸಿರುವ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಕೀರ್ತಿ ಆಜಾದ್ ಭಾನುವಾರ ಉಪವಾಸ ಆರಂಭಿಸಿದ್ದಾರೆ.
ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದ ಹೊರಗೆ ಉಪವಾಸ ಆರಂಭಿಸಿರುವ ಆಜಾದ್, `ಕ್ರಿಕೆಟ್ ವೀಕ್ಷಿಸುತ್ತಿರುವ ಎಲ್ಲರಿಗೂ ನನ್ನದೊಂದು ಪ್ರಶ್ನೆ. ಇಲ್ಲಿ ಪಾರದರ್ಶಕತೆ ಬೇಡವೇ? ಕ್ರೀಡೆಯಲ್ಲಿ ತುಂಬಾ ರಾಜಕೀಯವಿದೆ. ಅದರಲ್ಲೂ ಐಪಿಎಲ್ ಟೂರ್ನಿ ಬಾಲಿವುಡ್ ಸಿನಿಮಾದ ಕಥಾವಸ್ತುವಿನಂತಾಗಿದೆ. ಸಿನಿಮಾದಲ್ಲಿರುವ ನಟ, ನಟಿ, ಖಳನಾಯಕ, ಕಪ್ಪುಹಣ, ಮಾನಭಂಗ, ಅತ್ಯಾಚಾರ. ಮೋಸದಾಟ, ದುರಾಸೆ ಐಪಿಎಲ್ನಲ್ಲೂ ಇವೆ~ ಎಂದಿದ್ದಾರೆ.
ತನಿಖೆಗೆ ವಿಶೇಷ ತಂಡ
ನವದೆಹಲಿ (ಪಿಟಿಐ): ದೇಶದಾದ್ಯಂತ ಹರಡಿರುವ ಬಿಸಿಸಿಐ ಮತ್ತು ಐಪಿಎಲ್ನ ಆಸ್ತಿಗಳ ಅಂದಾಜು ಮೌಲ್ಯಗಳು ಮತ್ತು ತನಿಖಾ ಪ್ರಕ್ರಿಯೆಗಳನ್ನು ಒಂದೆಡೆಗೆ ತರಲು ಆದಾಯ ತೆರಿಗೆ ಇಲಾಖೆಯು ವಿಶೇಷ ಲೆಕ್ಕಪರಿಶೋಧನಾ ತಂಡವನ್ನು ರಚಿಸಿದೆ.
ಬಿಸಿಸಿಐನ 2010-11 ಮತ್ತು 2011-12ನೇ ಆರ್ಥಿಕ ಸಾಲಿನ ತೆರಿಗೆ ಅಂದಾಜು, ಕ್ರಿಕೆಟ್ ಮಂಡಳಿ ಅನುಭವಿಸಿದ ತೆರಿಗೆ ವಿನಾಯಿತಿಯ ಲೆಕ್ಕ, ಟಿ-20 ಐಪಿಎಲ್ನ ವಿವಿಧ ಆವೃತ್ತಿಗಳು ಮತ್ತು ಹಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳ ವಿರುದ್ಧದ ತನಿಖೆಯನ್ನು ಆದಾಯ ತೆರಿಗೆ ಇಲಾಖೆಯ ಕೇಂದ್ರ ತೆರಿಗೆ ಘಟಕ ಈಗ ಕೈಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.