ADVERTISEMENT

ಐಪಿಎಲ್: ರಾಯಲ್ ಚಾಲೆಂಜರ್ಸ್ ಫೇವರಿಟ್

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2011, 19:30 IST
Last Updated 8 ಏಪ್ರಿಲ್ 2011, 19:30 IST
ಐಪಿಎಲ್: ರಾಯಲ್ ಚಾಲೆಂಜರ್ಸ್ ಫೇವರಿಟ್
ಐಪಿಎಲ್: ರಾಯಲ್ ಚಾಲೆಂಜರ್ಸ್ ಫೇವರಿಟ್   

ಕೊಚ್ಚಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್‌ನ ನಾಲ್ಕನೇ ಋತುವಿನ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಶನಿವಾರ ಆರಂಭಿಸಲಿದೆ. ಕೊಚ್ಚಿಯ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಡೇನಿಯಲ್ ವೆಟೋರಿ ನೇತೃತ್ವದ ತಂಡವು ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ ಪೈಪೋಟಿ ನಡೆಸಲಿದೆ.

ಕಳೆದ ಬಾರಿ ಅನಿಲ್ ಕುಂಬ್ಳೆ ಅವರ ನೇತೃತ್ವದಲ್ಲಿ ಮೂರನೇ ಸ್ಥಾನ ಪಡೆದಿದ್ದ ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ಶನಿವಾರ ಗೆಲುವು ಪಡೆಯುವ ‘ಫೇವರಿಟ್’ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಮತ್ತೊಂದೆಡೆ ಈ ಬಾರಿ ಹೊಸದಾಗಿ ಐಪಿಎಲ್‌ಗೆ ಸೇರಿರುವ ಕೊಚ್ಚಿ ತಂಡ ಕನಸಿನ ಆರಂಭದ ನಿರೀಕ್ಷೆಯಲ್ಲಿದೆ. ಶ್ರೀಲಂಕಾದ ಮಾಹೇಲ ಜಯವರ್ಧನೆ ಅವರು ಈ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಎಬಿ ಡಿವಿಲಿಯರ್ಸ್, ತಿಲಕರತ್ನೆ ದಿಲ್ಶಾನ್, ವಿರಾಟ್ ಕೊಹ್ಲಿ ಮತ್ತು ಸೌರಭ್ ತಿವಾರಿ ಅವರು ಬೆಂಗಳೂರು ತಂಡದ ಬ್ಯಾಟಿಂಗ್‌ಗೆ ಬಲ ನೀಡಲಿದ್ದಾರೆ. ದಿಲ್ಶಾನ್ ಅವರು ತಂಡದ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ರಾಯಲ್ ಚಾಲೆಂಜರ್ಸ್ ತಂಡಕ್ಕೆ ಹೋಲಿಸಿದರೆ ಕೊಚ್ಚಿ ತಂಡದ ಬ್ಯಾಟಿಂಗ್ ಅಲ್ಪ ದುರ್ಬಲವೆಂದೇ ಹೇಳಬಹುದು. ನಾಯಕ ಜಯವರ್ಧನೆ ಮತ್ತು ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಂತರೆ ತಂಡದ ಗೆಲುವಿನ ಕನಸಿಗೆ ಬಲ ದೊರೆಯಬಹುದು. ವಿವಿಎಸ್ ಲಕ್ಷ್ಮಣ್ ಮತ್ತು ಪಾರ್ಥಿವ್ ಪಟೇಲ್ ಕೂಡಾ ತಂಡದಲ್ಲಿದ್ದಾರೆ.

ಬೌಲಿಂಗ್‌ನಲ್ಲಿ ಉಭಯ ತಂಡಗಳು ‘ಬ್ಯಾಲೆನ್ಸ್’ ಹೊಂದಿವೆ. ಜಹೀರ್ ಖಾನ್ ಮತ್ತು ನಾಯಕ ಡೇನಿಯಲ್ ವೆಟೋರಿ ಅವರು ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗದ ಚುಕ್ಕಾಣಿ ಹಿಡಿಯಲಿದ್ದಾರೆ. ಮತ್ತೊಂದೆಡೆ ಕೊಚ್ಚಿ ತಂಡ ವಿಶ್ವವಿಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರನ್ನು ನೆಚ್ಚಿಕೊಂಡಿದೆ. ಅವರಿಗೆ ಆರ್‌ಪಿ ಸಿಂಗ್ ಮತ್ತು ಎಸ್. ಶ್ರೀಶಾಂತ್ ಸಾಥ್ ನೀಡಲಿದ್ದಾರೆ.

ಕಳೆದ ಬಾರಿ ಆರ್‌ಸಿಬಿ ತಂಡದಲ್ಲಿದ್ದ ಆರ್. ವಿನಯ್ ಕುಮಾರ್ ಶನಿವಾರ ಕೊಚ್ಚಿ ಪರ ಕಣಕ್ಕಿಳಿಯಲಿದ್ದಾರೆ. ಬೆಂಗಳೂರು ತಂಡದ ವಿರುದ್ಧ ವಿನಯ್ ಯಾವ ರೀತಿಯ ಪ್ರದರ್ಶನ ನೀಡುವರು ಎಂಬುದನ್ನು ನೋಡಬೇಕು. ಕೇರಳ ರಣಜಿ ತಂಡದ ಕೆಲವು ಆಟಗಾರರಿಗೆ ತಮ್ಮ ಸಾಮರ್ಥ್ಯ ತೋರಿಸಿಕೊಡಲು ಐಪಿಎಲ್ ಉತ್ತಮ ವೇದಿಕೆ ಒದಗಿಸಿದೆ.

ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಡೇನಿಯಲ್ ವೆಟೋರಿ (ನಾಯಕ), ವಿರಾಟ್ ಕೊಹ್ಲಿ, ತಿಲಕರತ್ನೆ ದಿಲ್ಶಾನ್, ಎಬಿ ಡಿವಿಲಿಯರ್ಸ್, ಜಹೀರ್ ಖಾನ್, ಚೇತೇಶ್ವರ ಪೂಜಾರ, ಸೌರಭ್ ತಿವಾರಿ, ಮೊಹಮ್ಮದ್ ಕೈಫ್, ಮಯಾಂಕ್ ಅಗರ್‌ವಾಲ್, ಲೂಕ್ ಪೊಮರ್ಸ್‌ಬ್ಯಾಕ್, ರಿಲೀ ರೂಸೊ, ಜಾನ್ ವಾನ್‌ಡರ್ ವರ್ತ್, ಜೊನಾಥನ್ ವಾಂಡೀರ್, ಸಿ.ಎಂ. ಗೌತಮ್, ಚಾರ್ಲ್ ಲಾಂಗ್‌ವೆಲ್ಟ್, ಡಿರ್ಕ್ ನಾನೆಸ್, ಅಭಿಮನ್ಯು ಮಿಥುನ್, ಎಸ್. ಅರವಿಂದ್, ಅರುಣ್ ಕಾರ್ತಿಕ್, ಅಸದ್ ಖಾನ್ ಪಠಾಣ್, ಅಬ್ರಾರ್ ಖಾಜಿ, ರ್ಯಾನ್ ನಿನನ್, ಭರತ್ ನಾರಾಯಣನ್, ನುವಾನ್ ಪ್ರದೀಪ್

ಕೊಚ್ಚಿ ಟಸ್ಕರ್ಸ್ ಕೇರಳ: ಮಾಹೇಲ ಜಯವರ್ಧನೆ (ನಾಯಕ), ವಿವಿಎಸ್ ಲಕ್ಷ್ಮಣ್, ಬ್ರಾಡ್ ಹಾಡ್ಜ್, ಒವೇಸ್ ಶಾ, ಮೈಕಲ್ ಕ್ಲಿಂಗರ್, ಬ್ರೆಂಡನ್ ಮೆಕ್ಲಮ್, ಪಾರ್ಥಿವ್ ಪಟೇಲ್, ರವೀಂದ್ರ ಜಡೇಜ, ತಿಸಾರ ಪೆರೇರಾ, ಜಾನ್ ಹೇಸ್ಟಿಂಗ್ಸ್, ಸ್ಟೀವನ್ ಸ್ಮಿತ್, ಎಸ್. ಶ್ರೀಶಾಂತ್, ಆರ್‌ಪಿ ಸಿಂಗ್, ಮುತ್ತಯ್ಯ ಮುರಳೀಧರನ್, ರಮೇಶ್ ಪೊವಾರ್, ಆರ್. ವಿನಯ್ ಕುಮಾರ್, ಸ್ಟೀವ್ ಒಕೀಫ್, ದೀಪಕ್ ಚೌಗುಲೆ, ಬಿ. ಅಖಿಲ್, ರೈಫಿ ಗೊಮೆಜ್, ಕೇದಾರ್ ಜಾದವ್, ತನ್ಮಯ್ ಶ್ರೀವಾತ್ಸವ, ಯಶ್‌ಪಾಲ್ ಸಿಂಗ್, ಸುಶಾಂತ್ ಮರಾಠೆ, ಜ್ಞಾನೇಶ್ವರ ರಾವ್

ಪಂದ್ಯದ ಆರಂಭ: ರಾತ್ರಿ 8.00ಕ್ಕೆ

ನೇರ ಪ್ರಸಾರ: ಸೆಟ್‌ಮ್ಯಾಕ್ಸ್ 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT