ಇಪೊ, ಮಲೇಷ್ಯಾ: ಭಾರತ ತಂಡವು ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 2–3 ಗೋಲುಗಳಿಂದ ಸೋತರು.
ಮೊದಲ ಮೂರು ಪಂದ್ಯಗಳಲ್ಲಿ ನೀರಸ ಆಟವಾಡಿದ್ದ ಭಾರತ ನಾಲ್ಕನೇ ಪಂದ್ಯದಲ್ಲಿ ಮಲೇಷ್ಯಾವನ್ನು 5–1ರಿಂದ ಸೋಲಿಸಿದ್ದ ಭಾರತದ ಫೈನಲ್ ಕನಸು ಗರಿಗೆದರಿತ್ತು. ರೌಂಡ್ ರಾಬಿನ್ ಹಂತದ ಕೊನೆಯ ಪಂದ್ಯದಲ್ಲಿ ಶುಕ್ರವಾರ ಭಾರಿ ಅಂತರದಿಂದ ಗೆದ್ದರೆ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಕಾದಾಡುವ ಭರವಸೆ ಇತ್ತು. ಆದರೆ ತಂಡದ ಕನಸಿಗೆ ಐರ್ಲೆಂಡ್ ತಣ್ಣೀರೆರಚಿತು. ಮೊದಲ ನಾಲ್ಕು ಪಂದ್ಯಗಳಲ್ಲಿ ಸೋತಿದ್ದ ಈ ತಂಡ ಭಾರತಕ್ಕೆ ಅನಿರೀಕ್ಷಿತ ಆಘಾತ ನೀಡಿತು.
ಪಂದ್ಯದ ಆರಂಭದಲ್ಲಿ ಭಾರತ ಮೇಲುಗೈ ಸಾಧಿಸಿತ್ತು. ಹತ್ತನೇ ನಿಮಿಷದಲ್ಲಿ 1–0ಯಿಂದ ಮುಂದಿದ್ದ ತಂಡ 26ನೇ ನಿಮಿಷದಲ್ಲಿ 2–1ರ ಮುನ್ನಡೆ ಸಾಧಿಸಿತ್ತು. ಆದರೆ 36 ಮತ್ತು 42ನೇ ನಿಮಷಗಳಲ್ಲಿ ಸೀನ್ ಮರ್ರೆ ಮತ್ತು ಲೀ ಭಾರತಕ್ಕೆ ಆಘಾತ ನೀಡಿದರು.
ರಮಣದೀಪ್ ಸಿಂಗ್ (10ನೇ ನಿಮಿಷ) ಪೆನಾಲ್ಟಿ ಕಾರ್ನರ್ ಮೂಲಕ ಪಂದ್ಯದ ಮೊದಲ ಗೋಲು ಗಳಿಸಿದರು. 24ನೇ ನಿಮಿಷದಲ್ಲಿ ಗೋಲು ಗಳಿಸಿದ ಶೇನ್ ಒ ಡೊನುಗೆ ಐರ್ಲೆಂಡ್ ಸಮಬಲ ಸಾಧಿಸಲು ಕಾರಣರಾದರು. ಎರಡೇ ನಿಮಿಷಗಳ ಅಂತರದಲ್ಲಿ ಅಮಿತ್ ರೋಹಿದಾಸ್ ಗಳಿಸಿದ ಗೋಲು ಭಾರತಕ್ಕೆ ಮುನ್ನಡೆ ತಂದುಕೊಟ್ಟಿತು. ನಂತರ ಮರೆ ಮತ್ತು ಕೋಲ್ ಮಿಂಚಿದರು.
ಐದು ಮತ್ತು ಆರನೇ ಸ್ಥಾನ ನಿರ್ಣಯಿಸುವ ಪಂದ್ಯದಲ್ಲಿ ಭಾರತ ಶನಿವಾರ ಮತ್ತೆ ಐರ್ಲೆಂಡ್ ವಿರುದ್ಧ ಸೆಣಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.