ADVERTISEMENT

ಒತ್ತಡದಲ್ಲಿ ರೈಡರ್ಸ್ ಬಳಗ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:30 IST
Last Updated 16 ಅಕ್ಟೋಬರ್ 2012, 19:30 IST

ಡರ್ಬನ್ (ಪಿಟಿಐ): ಐಪಿಎಲ್‌ನಲ್ಲಿ ಚಾಂಪಿಯನ್ ಆಗಿ ಮೆರೆದಾಟ ನಡೆಸಿದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ದಿಕ್ಕು ತಪ್ಪಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಗೌತಮ್ ಗಂಭೀರ್ ಬಳಗ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಅಪಾಯದಲ್ಲಿದೆ.

ಬುಧವಾರ ನಡೆಯುವ ಪಂದ್ಯದಲ್ಲಿ ನೈಟ್ ರೈಡರ್ಸ್ ತಂಡ ಪರ್ತ್ ಸ್ಕಾಚರ್ಸ್ ವಿರುದ್ಧ ಪೈಪೋಟಿ ನಡೆಸಲಿದೆ. ಕೋಲ್ಕತ್ತದ ತಂಡಕ್ಕೆ ಇದು `ಮಾಡು ಇಲ್ಲವೇ ಮಡಿ~ ಪಂದ್ಯ ಎನಿಸಿದೆ. ಸೋಲು ಅನುಭವಿಸಿದರೆ ಸೆಮಿಫೈನಲ್ ಪ್ರವೇಶದ ಕನಸು ಭಗ್ನಗೊಳ್ಳಲಿದೆ.

ಗಂಭೀರ್ ಬಳಗ ಅತಿಯಾದ ಆತ್ಮವಿಶ್ವಾಸದೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ಬಂದಿಳಿದಿತ್ತು. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಆಕ್ಲೆಂಡ್ ಏಸಸ್ ಕೈಯಲ್ಲಿ ಸೋಲು ಅನುಭವಿಸಿರುವ ಕಾರಣ ಇದೀಗ ಒತ್ತಡಕ್ಕೆ ಒಳಗಾಗಿದೆ. ಪ್ರಮುಖ ಆಟಗಾರರನ್ನು ಒಳಗೊಂಡಿದ್ದರೂ ಸಂಘಟಿತ ಪ್ರಯತ್ನ ನೀಡಲು ತಂಡ ವಿಫಲವಾಗಿದೆ.

ಜೋಹಾನ್ಸ್‌ಬರ್ಗ್ ಮತ್ತು ಕೇಪ್‌ಟೌನ್‌ನಲ್ಲಿ ಆಡಿರುವ ನೈಟ್ ರೈಡರ್ಸ್ ಮೂರನೇ ಪಂದ್ಯವನ್ನು ಡರ್ಬನ್‌ನಲ್ಲಿ ಆಡುತ್ತಿದೆ.

ಇಂದಿನ ಪಂದ್ಯಗಳು

ಆಕ್ಲೆಂಡ್- ಟೈಟಾನ್ಸ್
ಆರಂಭ: ಸಂಜೆ 5.00ಕ್ಕೆ
ನೈಟ್ ರೈಡರ್ಸ್- ಪರ್ತ್ ಸ್ಕಾಚರ್ಸ್
ಆರಂಭ: ರಾತ್ರಿ 9.00ಕ್ಕೆ
ಸ್ಥಳ: ಡರ್ಬನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.