ಜಲ್ಪೈಗುರಿ, ಪಶ್ಚಿಮಬಂಗಾಳ: ‘ಒಬ್ಬ ಕ್ರೀಡಾಪಟುವಿಗೆ ಅಗತ್ಯವಿರುವ ಪೌಷ್ಟಿಕ ಆಹಾರವನ್ನು ನಾವು ಮಗಳಿಗೆ ನೀಡಲು ಸಾಧ್ಯವಾಗಲಿಲ್ಲ. ನಮ್ಮ ಬಡತನದಲ್ಲಿಯೂ ಆಕೆ ಇಷ್ಟು ದೊಡ್ಡ ಸಾಧನೆ ಮಾಡಿದ್ದಾಳೆ. ಮುಂದೊಂದು ದಿನ ಆಕೆ ವಿಶ್ವ ಚಾಂಪಿಯನ್ ಆಗುವುದು ಖಚಿತ’–ಈಚೆಗೆ ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ಹೆಪ್ಟಥ್ಲಾನ್ನಲ್ಲಿ ಚಿನ್ನದ ಪದಕ ಗೆದ್ದ ಸ್ವಪ್ನಾ ಬರ್ಮನ್ ಅವರ ತಂದೆ ಪಂಚ ನನ್ ಬರ್ಮನ್ ಅವರ ಭಾವುಕ ಮಾತುಗಳಿವು.
ಉತ್ತರ ಬಂಗಾಳದ ಜಲಪೈ ಗುರಿಯಲ್ಲಿ ತಳ್ಳುಗಾಡಿ ನಡೆಸುತ್ತಾ ಜೀವನ ನಿರ್ವಹಣೆಗೆ ಹಣ ಗಳಿಸುತ್ತಿದ್ದ ಪಂಚನನ್ ಅವರು ಕೆಲವು ವರ್ಷ ಗಳಿಂದ ಪಾರ್ಶ್ವವಾಯುವಿನಿಂದ ಬಳಲು ತ್ತಿದ್ದಾರೆ. ಅದರಿಂದಾಗಿ ಕುಟುಂಬದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಸ್ವಪ್ನಾ ಅವರ ತಾಯಿ ಬಸನಾ ಅವರು ಚಹಾ ತೋಟದಲ್ಲಿ ಕೂಲಿಕೆಲಸ ಮಾಡು ತ್ತಾರೆ. ಅದರಿಂದ ಬರುವ ಹಣವೇ ಈ ಕುಟುಂಬಕ್ಕೆ ಆಧಾರವಾಗಿದೆ. ಸ್ವಪ್ನಾ ಅವರಿಗೆ ಇಬ್ಬರು ಅಕ್ಕಂದಿರು ಮತ್ತು ಒಬ್ಬ ಅಣ್ಣ ಇದ್ದಾರೆ.
‘ನಮ್ಮ ಮಗಳು ಇಷ್ಟು ಎತ್ತರಕ್ಕೆ ಬೆಳೆಯುತ್ತಾಳೆಂದು ಅಂದುಕೊಂಡಿರ ಲಿಲ್ಲ. ಆಕೆ ಓದಿನಲ್ಲಿಯೂ ಜಾಣೆ. ಇನ್ನಷ್ಟು ಉತ್ತಮ ಸಾಧನೆ ಮಾಡುವ ಸಾಮರ್ಥ್ಯ ಅವಳಿಗೆ ಇದೆ. ಅವಳಿಗೆ ಒಂದು ಉದ್ಯೋಗ ಸಿಗುವ ಭರವಸೆ ಮೂಡಿದೆ’ ಎಂದು ಹೇಳಿದ ಬಸನಾ ಗದ್ಗದಿತರಾದರು.
ಸ್ವಪ್ನಾ ಅವರನ್ನು ಅಭ್ಯಾಸ ಮಾಡಲು ಸಮೀಪದ ಕ್ಲಬ್ಗೆ ಬಸನಾ ಅವರು ಸೈಕಲ್ನಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದರು. ಸ್ವಪ್ನಾ ಅವರು ಶಾಲೆಯಲ್ಲಿ ಓದುವಾಗ ದೈಹಿಕ ಶಿಕ್ಷಣ ಶಿಕ್ಷಕ ವಿಸ್ವಜೀತ್ ಮಜುಮ್ದಾರ್ ಅವರು ತರಬೇತಿ ನೀಡಿದ್ದರು.
ಸದ್ಯ 20 ವರ್ಷ ವಯಸ್ಸಿನ ಸ್ವಪ್ನಾ ಅವರು ಕೋಲ್ಕತ್ತದ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.