ನಿಪ್ಪಾಣಿ: ಬೆಂಗಳೂರಿನ ವಿಜಯ ಬ್ಯಾಂಕ್ ಮತ್ತು ಮೂಡುಬಿದಿರೆಯ ಆಳ್ವಾಸ್ ತಂಡದವರು ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ‘ಎ’ ಗ್ರೇಡ್ ಮುಕ್ತ ಕಬಡ್ಡಿ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು.
ಮುನ್ಸಿಪಲ್ ಪ್ರೌಢಶಾಲೆಯ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಕ್ವಾರ್ಟರ್ಫೈನಲ್ನಲ್ಲಿ ವಿಜಯ ಬ್ಯಾಂಕ್ ತಂಡ ಮಹಾಲಿಂಗಪುರದ ಭೂಮಿಕಾ ತಂಡದ ವಿರುದ್ಧ 18–9ರಿಂದ ಜಯಗಳಿಸಿತು.
ಇತರ ಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಮಹಾರಾಷ್ಟ್ರ ಪೊಲೀಸ್ ತಂಡ 13-7 ರಲ್ಲಿ ಜಮ್ಮು –ಕಾಶ್ಮೀರ ತಂಡದ ವಿರುದ್ಧವೂ, ಪಂಜಾಬ್ ಪೊಲೀಸ್ ತಂಡ 36-15 ರಲ್ಲಿ ಗ್ರೀನ್ ಆರ್ಮಿ ತಂಡದ ಎದುರೂ, ರೆಡ್ ಆರ್ಮಿ ತಂಡ 37-34 ರಲ್ಲಿ ಪುಣೆಯ ಬಿಇಜಿ ಮೇಲೂ ಗೆಲುವು ಪಡೆದವು.
ಪುರುಷರ ಸೆಮಿಫೈನಲ್ನಲ್ಲಿ ವಿಜಯ ಬ್ಯಾಂಕ್ ತಂಡ ಮಹಾರಾಷ್ಟ್ರ ಪೊಲೀಸ್ ತಂಡದ ವಿರುದ್ಧ ಮತ್ತು ಪಂಜಾಬ್ ಪೊಲೀಸ್ ತಂಡ ದೆಹಲಿಯ ರೆಡ್ ಆರ್ಮಿ ತಂಡದ ಎದುರು ಸೆಣಸಲಿವೆ.
ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಆಳ್ವಾಸ್ ತಂಡ ಬೆಳಗಾವಿ ಜಿಲ್ಲಾ ತಂಡವನ್ನು 13–3ರಿಂದ ಸೋಲಿಸಿತು.
ತಮಿಳುನಾಡಿನ ಶಕ್ತಿ ಟೈಲ್ಸ್ ತಂಡ ಜಮ್ಮು –ಕಾಶ್ಮೀರ ತಂಡವನ್ನು 33–5ರಿಂದ, ದೆಹಲಿಯ ಪಾಲಂ ಸ್ಪೋರ್ಟ್ಸ್ ತಂಡ ಬೆಂಗಳೂರಿನ ಮಾತಾ ತಂಡವನ್ನು 10–9ರಿಂದ, ಮುಂಬೈನ ಸೆಂಟ್ರಲ್ ರೈಲ್ವೆ, ತಮಿಳುನಾಡಿನ ಎಸ್ಎಂಸಿ ತಂಡವನ್ನು 15–14ರಿಂದ ಮಣಿಸಿದವು. ಸೆಮಿಫೈನಲ್ನಲ್ಲಿ ಸೆಂಟ್ರಲ್ ರೈಲ್ವೆ, ಶಕ್ತಿ ಟೈಲ್ಸ್ ವಿರುದ್ಧ ಹಾಗೂ ಆಳ್ವಾಸ್, ಪಾಲಂ ಸ್ಪೋರ್ಟ್ಸ್ ತಂಡದ ವಿರುದ್ಧ ಆಡಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.