
ಬೆಂಗಳೂರು: ಕರ್ನಾಟಕ ತಂಡದವರು ತೆಲಂಗಾಣದ ಕಮ್ಮಮ್ನಲ್ಲಿ ನಡೆದ 61ನೇ ರಾಷ್ಟ್ರೀಯ ಬಾಲ್ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಮಹಿಳಾ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಗುರುವಾರ ಸಂಜೆ ನಡೆದ ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಕರ್ನಾಟಕದ ವನಿತೆಯರು 29–35, 35–28, 29–35, 35–31, 35–27ರಿಂದ ತಮಿಳುನಾಡು ತಂಡ ವನ್ನು ಸೋಲಿಸಿದರು.
3 ಗಂಟೆ 5ನಿಮಿಷಗಳ ಕಾಲ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಜಿ.ಜಯಲಕ್ಷ್ಮಿ, ಎಂ.ಪಿ.ರಂಜಿತಾ ಅತ್ಯುತ್ತಮ ಸ್ಮ್ಯಾಷ್ಗಳ ಮೂಲಕ ಪರಿಣಾಮಕಾರಿ ಆಕ್ರಮಣ ನಡೆಸಿದರೆ, ಎಂ.ಆರ್.ಕಾವ್ಯಾ ಮತ್ತು ಕೆ.ಜಿ.ಯಶಸ್ವಿನಿ ಹಿಂದಿನ ಕೋರ್ಟ್ನಲ್ಲಿ ನಿಂತು ಅತ್ಯಂತ ಜಾಗರೂಕತೆಯಿಂದ ಆಡಿದರು.
ಈ ಐದೂ ಮಂದಿ ಆಟಗಾರ್ತಿಯರು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿದವರು. ಇದಕ್ಕೆ ಮೊದಲು ನಡೆದ ಸೆಮಿಫೈನಲ್ನಲ್ಲಿ ಕರ್ನಾಟಕ 35–25, 35–27, 29–35, 35–28ರಿಂದ ಆಂಧ್ರ ಪ್ರದೇಶ ತಂಡವನ್ನು ಸೋಲಿಸಿ ದರು.
ಕ್ವಾರ್ಟರ್ಫೈನಲ್ನಲ್ಲಿ ಕರ್ನಾಟಕ 35–21, 35–18ರಿಂದ ಮಹಾರಾಷ್ಟ್ರ ವನ್ನು ಮಣಿಸಿತು.‘ಬಿ’ ಗುಂಪಿನ ಲೀಗ್ ಪಂದ್ಯಗಳಲ್ಲಿ ಕರ್ನಾಟಕ ತಂಡದ ಆಟಗಾರ್ತಿಯರು ಉತ್ತರ ಪ್ರದೇಶ, ದೆಹಲಿ, ಮುಂಬೈ, ಒಡಿಶಾ, ರಾಜಸ್ತಾನ ತಂಡಗಳನ್ನು ಸುಲಭವಾಗಿ ಸೋಲಿಸಿ, ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ ನಾಕೌಟ್ ಹಂತ ತಲುಪಿದ್ದರು.
ತೆಲಂಗಾಣದ ನಂದ್ಯಾಲದಲ್ಲಿ 2010ರಲ್ಲಿ ಆಳ್ವಾಸ್ ಸಂಸ್ಥೆಯ ಪೂರ್ಣಿಮಾ ನೇತೃತ್ವದಲ್ಲಿ ಆಡಿದ್ದ ಕರ್ನಾಟಕ ತಂಡ ರಾಷ್ಟ್ರೀಯ ಚಾಂಪಿಯನ್ಷಿಪ್ ಗೆದ್ದಿತ್ತು. ಆ ನಂತರ ಇದೇ ಮೊದಲ ಬಾರಿಗೆ ಕರ್ನಾಟಕ ರಾಷ್ಟ್ರೀಯ ಪ್ರಶಸ್ತಿ ಗೆದ್ದಿದೆ. ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡ ಆರನೇ ಸ್ಥಾನ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.