ನವದೆಹಲಿ/ಮುಂಬೈ (ಪಿಟಿಐ): ತಂಡದೊಂದಿಗಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಒಪ್ಪಂದವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರದ್ದುಮಾಡಿರುವ ಕ್ರಮವನ್ನು ಪ್ರಶ್ನಿಸಿ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದ ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಬ್ಯಾಂಕ್ ಖಾತರಿ ಮೊತ್ತ ನೀಡಲು ತಂಡ ವಿಫಲವಾದ ಕಾರಣ ಬಿಸಿಸಿಐ ಕೊಚ್ಚಿ ಜೊತೆಗಿನ ಒಪ್ಪಂದವನ್ನು ಸೋಮವಾರ ನಡೆದ ವಾರ್ಷಿಕ ಸಭೆಯಲ್ಲಿ ತಿರಸ್ಕರಿಸಿತ್ತು.
ಈ ಕುರಿತು ಕೊಚ್ಚಿ ಆಡಳಿತ ಮಂಡಳಿ ಬುಧವಾರ ಹೈಕೋರ್ಟ್ ಮೊರೆ ಹೋಗಿತ್ತು. ಈ ಕುರಿತು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಈ ಅರ್ಜಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ.
ಮಂಡಳಿಯ ಜೊತೆಗಿನ ಒಪ್ಪಂದದ ಪ್ರಕಾರ ಫ್ರಾಂಚೈಸಿ ಪ್ರತಿ ವರ್ಷ 156 ಕೋಟಿ ರೂ. ಮೊತ್ತ ಬ್ಯಾಂಕ್ ಖಾತರಿ ರೂಪದಲ್ಲಿ ಪಾವತಿಸಬೇಕಿತ್ತು. ಆದರೆ ನಿಗದಿತ ದಿನಾಂಕದೊಳಗೆ ಇದನ್ನು ಪಾವತಿಸಲು ವಿಫಲವಾಗಿದೆ.
ಕೊಚ್ಚಿ ತಂಡದೊಂದಿಗಿನ ಒಪ್ಪಂದ ರದ್ದು ಮಾಡಿರುವ ಮಂಡಳಿಯ ನಿರ್ಧಾರ ಕಾನೂನು ಬಾಹಿರ. ಈ ಕುರಿತು ಕಾನೂನು ಸಮರ ನಡೆಸುವುದಾಗಿ ತಂಡದ ನಿರ್ದೇಶಕ ಮುಖೇಶ್ ಪಾಟೀಲ್ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.