ADVERTISEMENT

ಕ್ರಿಕೆಟ್: ಇಂದು ನಾಲ್ಕನೇ ಏಕದಿನ ; ಆತ್ಮವಿಶ್ವಾಸದಲ್ಲಿ ಇಂಗ್ಲೆಂಡ್...

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ಲಂಡನ್: ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿದ ಭಾರತ ತಂಡ ಏಕದಿನ ಕ್ರಿಕೆಟ್ ಸರಣಿಯನ್ನೂ ಕಳೆದುಕೊಳ್ಳುವ ಅಪಾಯದಲ್ಲಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಗೆಲುವು ಪಡೆಯುವ ಕನಸು ಈಗಾಗಲೇ ಅಸ್ತಮಿಸಿದೆ. ಇನ್ನು ಏನಿದ್ದರೂ ಸಮಬಲ ಸಾಧಿಸುವುದಷ್ಟೇ ಭಾರತದ ಮುಂದಿರುವ ದಾರಿ. ಅದಕ್ಕೆ ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲುವು ಅನಿವಾರ್ಯ.

ಮೂರು ಪಂದ್ಯಗಳ ಬಳಿಕ ಇಂಗ್ಲೆಂಡ್ 2-0 ರಲ್ಲಿ ಮುನ್ನಡೆ ಪಡೆದಿದೆ. ಸರಣಿಯ ಮೊದಲ ಹಣಾಹಣಿ ಮಳೆಯಿಂದಾಗಿ ರದ್ದಾಗಿತ್ತು. ಉಭಯ ತಂಡಗಳ ನಡುವಿನ ನಾಲ್ಕನೇ ಪಂದ್ಯ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿದೆ.

ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆದ್ದು ಸರಣಿಯನ್ನು ಸಮಬಲ ಮಾಡಿಕೊಂಡು ತವರಿಗೆ ಮರಳಬೇಕೆಂಬುದು ಮಹಿ ಬಳಗದ ಗುರಿ. ಇದು ನಿರೀಕ್ಷಿಸಿದಷ್ಟು ಸುಲಭವಲ್ಲ. ಅದ್ಭುತ ಪ್ರದರ್ಶನ ನೀಡುತ್ತಿರುವ ಆತಿಥೇಯ ತಂಡ ಭಾನುವಾರದ ಪಂದ್ಯ ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದೆ.

ಭಾರತಕ್ಕೆ ಗೆಲುವು ಪಡೆಯಲು ಅಸಾಮಾನ್ಯ ಪ್ರದರ್ಶನ ನೀಡುವುದು ಅಗತ್ಯ. ಶುಕ್ರವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ದೋನಿ ಪಡೆಗೆ 3 ವಿಕೆಟ್‌ಗಳ ಸೋಲು ಎದುರಾಗಿತ್ತು. ಆದರೆ ಈ ಪಂದ್ಯದಲ್ಲಿ ಕೆಲವೊಂದು ಸಕಾರಾತ್ಮಕ ಅಂಶಗಳು ಭಾರತಕ್ಕೆ ಲಭಿಸಿದ್ದವು. ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್ ನೀಡಿದ ಪ್ರದರ್ಶನ ಭಾರತ ತಂಡದಲ್ಲಿ ಹೊಸ ಉತ್ಸಾಹ ಉಂಟುಮಾಡಿದೆ.

ಇವರಿಬ್ಬರು ಓವಲ್ ಕ್ರೀಡಾಂಗಣದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ್ದರು. ಜಡೇಜ  ಆಗಮನದಿಂದ ತಂಡಕ್ಕೆ ಸಮತೋಲನ ಲಭಿಸಿದೆ. ಮಾತ್ರವಲ್ಲ ಐದನೇ ಬೌಲರ್‌ನ ಕೊರತೆಯೂ ನೀಗಿದೆ.

ಆದರೆ ಇವರಿಬ್ಬರು ಮಾತ್ರ ಪಂದ್ಯವನ್ನು ಗೆಲ್ಲಿಸಿಕೊಡಬೇಕು ಎಂದು ಯೋಚಿಸುವುದರಲ್ಲಿ ಅರ್ಥವಿಲ್ಲ. ಇತರ ಆಟಗಾರರೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಭಾರತದ ಸತತ ಸೋಲಿನ ವೈಫಲ್ಯಕ್ಕೆ ಲಾರ್ಡ್ಸ್‌ನಲ್ಲಿ ತೆರೆಬೀಳುವುದೇ ಎಂಬುದನ್ನು ನೋಡಬೇಕು.

ತಂಡಗಳು
ಭಾರತ
: ಮಹೇಂದ್ರ ಸಿಂಗ್ ದೋನಿ (ನಾಯಕ), ಆಜಿಂಕ್ಯ ರಹಾನೆ, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಮನೋಜ್ ತಿವಾರಿ, ಸುರೇಶ್ ರೈನಾ, ಪ್ರವೀಣ್ ಕುಮಾರ್, ಮುನಾಫ್ ಪಟೇಲ್, ಆರ್‌ಪಿ ಸಿಂಗ್, ವಿನಯ್ ಕುಮಾರ್, ಆರ್. ಅಶ್ವಿನ್, ಅಮಿತ್ ಮಿಶ್ರಾ, ಪಾರ್ಥಿವ್ ಪಟೇಲ್, ರವೀಂದ್ರ ಜಡೇಜ, ವರುಣ್ ಆಯರನ್.

ಇಂಗ್ಲೆಂಡ್:
ಅಲಸ್ಟರ್ ಕುಕ್ (ನಾಯಕ), ಜೇಮ್ಸ ಆ್ಯಂಡರ್‌ಸನ್, ಇಯಾನ್ ಬೆಲ್, ರವಿ ಬೋಪಾರ, ಟಿಮ್ ಬ್ರೆಸ್ನನ್, ಸ್ಟುವರ್ಟ್ ಬ್ರಾಡ್, ಜೇಡ್ ಡೆರ್ನ್‌ಬಾಕ್, ಸ್ಟೀವನ್ ಫಿನ್, ಕ್ರೆಗ್ ಕೀಸ್‌ವೆಟರ್, ಸಮಿತ್ ಪಟೇಲ್, ಬೆನ್ ಸ್ಟೋಕ್ಸ್, ಗ್ರೇಮ್ ಸ್ವಾನ್, ಜೊನಾಥನ್ ಟ್ರಾಟ್.

ಪಂದ್ಯದ ಆರಂಭ: (ಭಾರತೀಯ ಕಾಲಮಾನ) ಮಧ್ಯಾಹ್ನ 2.45ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.