ಬೆಂಗಳೂರು: ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಸಿ.ಎಂ.ಗೌತಮ್ ಅವರನ್ನು ಮಾರ್ಚ್ ಐದರಂದು ನವದೆಹಲಿಯಲ್ಲಿ ಆರಂಭವಾಗಲಿರುವ ವಿಜಯ ಹಜಾರೆ ಟ್ರೋಫಿ ಅಖಿಲ ಭಾರತ ಏಕದಿನ ಕ್ರಿಕೆಟ್ ಟೂರ್ನಿಗೆ ಪ್ರಕಟಿಸಲಾಗಿರುವ ಕರ್ನಾಟಕ ತಂಡದಿಂದ ಕೈಬಿಡಲಾಗಿದೆ.
ಅವರ ಬದಲಿಗೆ ಆಫ್ ಸ್ಪಿನ್ನರ್ ಕೆ.ಗೌತಮ್ಗೆ ಸ್ಥಾನ ನೀಡಲಾಗಿದೆ. ನಾಯಕ ರಾಬಿನ್ ಉತ್ತಪ್ಪ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಈ ಟೂರ್ನಿಗೆ ಗುರುವಾರ ಜೆ.ಅಭಿರಾಮ್ ಸಾರಥ್ಯದ ರಾಜ್ಯ ಆಯ್ಕೆ ಸಮಿತಿಯು 15 ಆಟಗಾರರ ತಂಡ ಪ್ರಕಟಿಸಿತು.
ಉದ್ಯಾನ ನಗರಿಯಲ್ಲಿ ನಡೆದ ಕೆ.ಎಸ್.ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಗಿತ್ತು. ಉತ್ತಪ್ಪ ಎರಡು ಶತಕ ಗಳಿಸಿ ಗಮನ ಸೆಳೆದಿದ್ದರು. ಕರ್ನಾಟಕ ತಂಡವು ವಿಜಯ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು ಎದುರಿಸಲಿದೆ.
ತಂಡ ಇಂತಿದೆ: ರಾಬಿನ್ ಉತ್ತಪ್ಪ (ನಾಯಕ-ವಿಕೆಟ್ ಕೀಪರ್), ಕರುಣ್ ನಾಯರ್, ಗಣೇಶ್ ಸತೀಶ್, ಮನೀಷ್ ಪಾಂಡೆ, ಅಮಿತ್ ವರ್ಮ, ಸ್ಟುವರ್ಟ್ ಬಿನ್ನಿ (ಉಪ ನಾಯಕ), ಕೆ.ಗೌತಮ್, ಸುನಿಲ್ ಎನ್.ರಾಜು, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಕೆ.ಪಿ.ಅಪ್ಪಣ್ಣ, ಕುನಾಲ್ ಕಪೂರ್, ರಾಜೂ ಭಟ್ಕಳ್, ಅಬ್ರಾರ್ ಖಾಜಿ ಹಾಗೂ ಮಾಯಂಕ್ ಅಗರ್ವಾಲ್. ಕೋಚ್: ಕೆ.ಜೆಸ್ವಂತ್, ಸಹಾಯಕ ಕೋಚ್: ಸೋಮಶೇಖರ ಶಿರಗುಪ್ಪಿ, ಮ್ಯಾನೇಜರ್: ಆರ್.ಸುಧಾಕರ್ ರಾವ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.