ADVERTISEMENT

ಗಂಗೋತ್ರಿ ಪೆವಿಲಿಯನ್ ಅವೈಜ್ಞಾನಿಕ

ಕೆಎಸ್‌ಸಿಎ ಕಾರ್ಯದರ್ಶಿ ಬ್ರಿಜೇಶ್ ಕಿಡಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 19:30 IST
Last Updated 23 ಡಿಸೆಂಬರ್ 2013, 19:30 IST

ಮೈಸೂರು: ‘ಈ ಕಟ್ಟಡದ ಅಂಪೈರ್ ಕೋಣೆಯಲ್ಲಿ ಒಬ್ಬರು ಸರಿಯಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇಂತಹ ಇಕ್ಕಟ್ಟಾದ ಕೋಣೆ ಕಟ್ಟುವ ಅವಶ್ಯಕತೆ ಏನಿತ್ತು. ಆಟಗಾರರಿಗೂ ಉತ್ತಮ ಸ್ಥಳಾವಕಾಶ ಇದರಲ್ಲಿ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವೈದ್ಯಕೀಯ ಕೋಣೆಯೂ ಇಲ್ಲಿ ಇಲ್ಲ’– ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದ ಅಮೃತ ಮಹೋತ್ಸವ ಪೆವಿಲಿಯನ್ ಕುರಿತು  ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಅವರ ಅಸಮಾಧಾನದ ಮಾತುಗಳಿವು.

ಸೋಮವಾರ ರಣಜಿ ಕ್ವಾರ್ಟರ್‌ಫೈನಲ್ ಪಂದ್ಯದ ತಟಸ್ಥ ಸ್ಥಳವಾಗಿರುವ ಗ್ಲೇಡ್ಸ್‌ನ ಪೆವಿಲಿಯನ್ ಪರಿಶೀಲಿಸಿ ತಮ್ಮ ಅತೃಪ್ತಿ ವ್ಯಕ್ತಪಡಿಸಿದರು. ಒಂದೂವರೆ ವರ್ಷದ ಹಿಂದೆ ಈ ಪೆವಿಲಿಯನ್ ಅನ್ನು ನಿರ್ಮಾಣ ಮಾಡಲಾಗಿತ್ತು. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬ್ರಿಜೇಶ್ ತಮ್ಮ ತಂಡದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು.

‘ಈ ಪೆವಿಲಿಯನ್‌ ಅವೈಜ್ಞಾನಿಕವಾಗಿದೆ. ಮುಂದಿನ ಹಂತದಲ್ಲಿ ಇದನ್ನು ನವೀಕರಿಸುವ ಕುರಿತು ಸಭೆಯಲ್ಲಿ ಚರ್ಚಿಸಿ, ವಾಸ್ತು ವಿನ್ಯಾಸಕಾರರಿಂದ ಸಲಹೆ ಪಡೆಯುತ್ತೇವೆ. ಈ ಮೊದಲು ಇದ್ದ ಪೆವಿ ಲಿಯನ್, ಒಳಾಂಗಣ ಕಟ್ಟಡ ಯೋಜನೆ (ಪ್ಲ್ಯಾನ್) ಕುರಿತೂ ಮರು ಪರಿಶೀಲನೆ ನಡೆ ಸುತ್ತೇವೆ. ಕಟ್ಟಿಸು ವಾ ಗಲೇ ಎಲ್ಲ ಅಂಶ ಗಳನ್ನೂ ಪರಿಗಣಿಸ ಬೇಕಿತ್ತು.

ಹಳೆಯ ಕಾಲದ ಕ್ರಿಕೆಟ್ ಈಗ ಇಲ್ಲ. ಒಂದು ತಂಡದಲ್ಲಿ 16 ಆಟಗಾರರು, ಕೋಚ್, ಮ್ಯಾನೇಜರ್, ಫಿಸಿಯೋ, ವಿಡಿಯೋ ವಿಶ್ಲೇಷಣಾ ತಂಡ, ವೈದ್ಯಕೀಯ ತಂಡ ಸೇರಿ ಕನಿಷ್ಠ 25ಕ್ಕೂ ಹೆಚ್ಚು ಮಂದಿ ಇರುತ್ತಾರೆ. ಅಂತಹ ತಂಡಕ್ಕೆ ಇಲ್ಲಿರುವ ಕೋಣೆಗಳು ಸಾಕಾಗುವುದಿಲ್ಲ. ಆಟಗಾರರ ಮಸಾಜ್, ಫಿಸಿಯೋಥೆರಪಿಯನ್ನು ಕೋಣೆಯಿಂದ ಹೊರಗೆ ಮಾಡುವ ಪರಿಸ್ಥಿತಿಯಿದೆ.

  ಕ್ರಿಕೆಟ್‌ ಬಗ್ಗೆ ನಮಗೆ ಪ್ರೀತಿಯಿದೆ, ಆಸಕ್ತಿಯಿದೆ ಎಂದು ಬರೀ ಮಾತಾನಾಡುವುದರಿಂದ ಅಭಿವೃದ್ಧಿಯಾಗುವುದಿಲ್ಲ. ಆಟ ಮತ್ತು ಆಟಗಾರರ ಹಿತಾಸಕ್ತಿಯಿಂದ ಯೋಜನೆಗಳನ್ನು ರೂಪಿಸಬೇಕು’ ಎಂದು ಹಿಂದಿನ ಆಡಳಿತ ಮಂಡಳಿಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.