ADVERTISEMENT

ಗೆಲುವಿನ ಖುಷಿ ಆಚರಿಸಿದ ಆರ್‌ಸಿಬಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ಬೆಂಗಳೂರು: ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದವರು ನೃತ್ಯ ಮಾಡುವ ಮೂಲಕ ಗೆಲುವಿನ ಖುಷಿ ಆಚರಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಎರಡು ರನ್‌ಗಳ ರೋಚಕ ಗೆಲುವು ಪಡೆದಿತ್ತು. ಕೊನೆಯ ಎಸೆತದಲ್ಲಿ ಇಂಡಿಯನ್ಸ್‌ಗೆ ಅಗತ್ಯವಿದ್ದ ನಾಲ್ಕು ರನ್‌ಗಳನ್ನು ಗಳಿಸಲು ವಿನಯ್ ಕುಮಾರ್ ಅವಕಾಶ ನೀಡದೇ ಆರ್‌ಸಿಬಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಡೇನಿಯಲ್ ವೆಟೋರಿ, ಮರಳೀಧರನ್ ಹಾಗೂ ಜಹೀರ್ ಖಾನ್ ಅವರೂ ಸಂಭ್ರಮಾಚರಣೆ ವೇಳೆ `ಉಲಾ ಲೇ ಉಲಾ....' ಹಾಡಿ ಖುಷಿ ಪಟ್ಟರು.

ಗೇಲ್ ಭಿನ್ನ: `ಕ್ರಿಸ್‌ಗೇಲ್ ಎಲ್ಲರಿಗಿಂತ ಭಿನ್ನವಾದ ಬ್ಯಾಟ್ಸ್‌ಮನ್. ಎಲ್ಲಾ ಬೌಲರ್‌ಗಳನ್ನು ಅವರು ದಂಡಿಸಿದರು. 92 ರನ್ ಗಳಿಸುವ ಮೂಲಕ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದರು. ಆದ್ದರಿಂದ ಅವರು ಭಿನ್ನ ಆಟಗಾರ ಎನಿಸಿಕೊಳ್ಳುತ್ತಾರೆ' ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯ ಪಟ್ಟರು.

ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿದ್ದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆಯೇ ಎನ್ನುವ ಪ್ರಶ್ನೆಗೆ `ಮೊದಲ ಐವರು ಬ್ಯಾಟ್ಸ್‌ಮನ್‌ಗಳು ಉತ್ತಮ ಮೊತ್ತ ಕಲೆ ಹಾಕುವಲ್ಲಿ ವಿಫಲರಾಗಿದ್ದು ನಮ್ಮ ವೈಫಲ್ಯಕ್ಕೆ ಕಾರಣವಾಯಿತು' ಎಂದರು.
`ಮುಂಬೈ ತಂಡವನ್ನು ಸೋಲಿಸಲು 156 ರನ್ ಸಾಕು ಎಂಬುದು ನಮಗೆ ಗೊತ್ತಿತ್ತು. ಗೇಲ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಕೊನೆಯಲ್ಲಿ ಪಂದ್ಯ ಕೈ ತಪ್ಪಿ ಹೋಗುವ ಭೀತಿ ಎದುರಾಗಿತ್ತು' ಎಂದು ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.