ADVERTISEMENT

ಚಿತ್ತೂರಿನಲ್ಲಿ ಸಂತಸದ ಹೊನಲು

ಮಹೇಶ ಕನ್ನೇಶ್ವರ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಚಿತ್ತೂರಿನಲ್ಲಿ ಸಂತಸದ ಹೊನಲು
ಚಿತ್ತೂರಿನಲ್ಲಿ ಸಂತಸದ ಹೊನಲು   

ಮಂಗಳೂರು: ಆಸ್ಟೇಲಿಯಾದ ಕಡಲ ತೀರದ ಗೋಲ್ಡ್‌ಕೋಸ್ಟ್‌ನಲ್ಲಿ ಗುರುರಾಜ್ ಪೂಜಾರಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದೇ ತಡ, ಇತ್ತ ಕುಂದಾಪುರ ತಾಲ್ಲೂಕಿನ ಚಿತ್ತೂರು ಜಡ್ಡುವಿನಲ್ಲಿ ಸಂಭ್ರಮ ಅಲೆಅಲೆಯಾಗಿ ಉಕ್ಕಿತು.

ಸುಮಾರು 10 –15 ಮನೆಗಳು ಇರುವ ಜಡ್ಡು ಕುಗ್ರಾಮದಲ್ಲಿರುವ ಗುರುರಾಜ್ ಮನೆಗೆ ಆಕ್ಕಪಕ್ಕದ ಮನೆಗಳವರು, ಊರಿನವರು ಬಂದು ಶುಭಾಶಯ ಹೇಳಿದರು. ಸಿಹಿ ಹಂಚಿ ಸಂತಸ ಹೆಚ್ಚಿಸಿದರು.

‘ಮಗ ಗುರುರಾಜ ತುಂಬಾ ಕಷ್ಟದಲ್ಲಿ ಬೆಳೆದು, ಇವತ್ತು ಈ ಮಟ್ಟಕ್ಕೆ ಬಂದಿದ್ದಾನೆ. ಅವನೊಬ್ಬ ಸಾಧಕ, ಚಿನ್ನ ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸದಿಂದಲೇ ತೆರಳಿದ್ದ. ಬಹಳ ಸ್ಪರ್ಧೆ ಇತ್ತು. ಅದಕ್ಕಾಗಿ ಅವನಿಗೆ ಬೆಳ್ಳಿ ಬಂದಿದೆ. ದೇವರು ಏನೇ ಕೊಟ್ಟರೂ ಅದನ್ನು ಪ್ರಸಾದ ಎಂದು ಕಣ್ಣಿಗೆ ಒತ್ತಿಕೊಳ್ಳುತ್ತೇವೆ’ ಎಂದು ತಂದೆ ಮಹಾಬಲ ಪೂಜಾರಿ ಭಾವಪರವಶರಾದರು.

ADVERTISEMENT

ಪಿಕಪ್‌ ಗೂಡ್ಸ್‌ ವಾಹನದ ಚಾಲಕರಾಗಿರುವ ಮಹಾಬಲ ಪೂಜಾರಿ ಅವರ ಆರು ಮಕ್ಕಳಲ್ಲಿ ಗುರುರಾಜ್‌ ಐದನೇಯವರು. ಕಡುಬಡತನದಲ್ಲಿಯೂ ಮಗನ ಪ್ರತಿಭೆಗೆ ಆಸರೆಯಾದವರು ಈತನ ಪೋಷಕರು. ವಂಡ್ಸೆಯ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸದ ಬಳಿಕ ಕೊಲ್ಲೂರಿನಲ್ಲಿ  ಮೂಕಾಂಬಿಕಾ ಶಿಕ್ಷಣ ಸಂಸ್ಥೆಗೆ ಸೇರಿದ್ದ ಅವರಿಗೆ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕೇಶ್‌ ಶೆಟ್ಟಿ ಹೊಸ್ಮಠ ಸ್ಫೂರ್ತಿಯ ಸೆಲೆಯಾಗಿದ್ದರು.

ಕುಸ್ತಿಪಟುವಾಗಿ ಭರವಸೆ ಮೂಡಿಸಿದ್ದ ಅವರು ನಂತರದ ದಿನಗಳಲ್ಲಿ ವೇಟ್‌ ಲಿಫ್ಟಿಂಗ್‌ ಆಯ್ಕೆ ಮಾಡಿಕೊಂಡಿದ್ದರು. ಪದವಿ ಶಿಕ್ಷಣಕ್ಕಾಗಿ ಉಜಿರೆಯ ಎಸ್‌ಡಿಎಂ ಕಾಲೇಜಿಗೆ ಸೇರ್ಪಡೆಯಾಗಿದ್ದ ಅವರು ಕಾಲೇಜಿನ ಕೋಚ್‌ ರಾಜೇಂದ್ರ ಪ್ರಸಾದ್‌ ಅವರಿಂದ ವೇಟ್‌ಲಿಫ್ಟಿಂಗ್‌ನ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದರು.

‘ಊರಿಗೆ ಮಗ ಬಂದ ಮೇಲೆ ನಮ್ಮ ಸಂಭ್ರಮ ಮತ್ತಷ್ಟು ಹೆಚ್ಚುತ್ತದೆ. ಎಲ್ಲರೂ ಬಂದು ಮಗನ ಸಾಧನೆ ಹೊಗಳುತ್ತಿದ್ದಾರೆ. ಅದೇ ನಮಗೆ ದೊಡ್ಡ ಪ್ರಶಸ್ತಿ ಇದ್ದಂತೆ. ಮೊದಲು ಅವನು ಕುಸ್ತಿ, ಕಬಡ್ಡಿ ಆಡುತ್ತಿದ್ದ.  ನಮಗೆ ಅಷ್ಟಾಗಿ  ಆಟದ ಬಗ್ಗೆ ಗೊತ್ತಿರಲಿಲ್ಲ. ಆದರೆ ಸ್ವಪ್ರಯತ್ನ ಶ್ರಮದಿಂದ ಈ ಮಟ್ಟಕ್ಕೆ ಬೆಳೆದಿದ್ದಾನೆ’ ಎಂದು ತಾಯಿ ಪದ್ದು ಪೂಜಾರ್ತಿ ಹೇಳಿದರು.

ಎಸ್‌ಡಿಎಂ ಕಾಲೇಜಿನಲ್ಲಿಯೂ ಕಳೆ ಕಟ್ಟಿದ ಸಂಭ್ರಮ:
ಗುರುರಾಜ ಪೂಜಾರಿ ದೇಶದ ಪರ ಮೊದಲ ಪದಕ ಗಳಿಸುತ್ತಿದ್ದಂತೆ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಹಬ್ಬದ ವಾತಾವಣ ನಿರ್ಮಾಣವಾಯಿತು. ಕಾಲೇಜು ಆವರಣದಲ್ಲಿ ಗುರುರಾಜ ಭಾವಚಿತ್ರಕ್ಕೆ ಹಾರ ಹಾಕಿ ಸಂಭ್ರಮಿಸಲಾಯಿತು.

‘ತುಂಬಾ ಕಷ್ಟದಲ್ಲಿ ಸಾಧನೆ ಮಾಡಿದ್ದಾನೆ. ಅವನ ಶ್ರಮಕ್ಕೆ ತಕ್ಕ ಪ್ರತಿಫಲ ಈಗ ಸಿಕ್ಕಿದೆ’ ಎಂದು ಗುರುರಾಜ್‌ ಅವರ ಕೋಚ್ ರಾಜೇಂದ್ರ ಪ್ರಸಾದ್‌ ಹೇಳಿದರು.

ಚಿನ್ನಕ್ಕೇ ಗುರಿ ಇಟ್ಟಿದ್ದರು

‘56 ಕೆ.ಜಿ ವಿಭಾಗದಲ್ಲಿ ಸಾಕಷ್ಟು ಸ್ಪರ್ಧೆ ಇತ್ತು. ಚಿನ್ನ ಗೆಲ್ಲುವ ವಿಶ್ವಾಸವೂ ಇತ್ತು. ಆದರೆ ಜರ್ಕ್‌ನಲ್ಲಿ ಎರಡು ಭಾರಿ ಗುರುರಾಜ ಲಿಫ್ಟ್‌ ಮಾಡಲು ಸಾಧ್ಯವಾಗದೇ ಇರುವ ಕಾರಣಕ್ಕೆ ಬೆಳ್ಳಿಗೆ ತೃಪ್ತಿ ಪಡುವಂತಾಯಿತು. ಭಾರತದ ಪಾಲಿಗೆ ಬೆಳ್ಳಿ ಬಂದಿರುವುದು ಖುಷಿ ತಂದಿದೆ. ಗುರುರಾಜ ಪೂಜಾರಿ ಒಬ್ಬ ಉತ್ತಮ ವೇಟ್‌ ಲಿಫ್ಟರ್‌’ ಎಂದು ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿರುವ ರಾಜ್ಯ ವೇಟ್‌ಲಿಫ್ಟಿಂಗ್‌  ಸಂಸ್ಥೆ ಕಾರ್ಯದರ್ಶಿ ಚಂದ್ರಹಾಸ್‌ ರೈ ಹೇಳಿದರು.

**

ಗುರುರಾಜ ಸಾಧನೆ ಕರಾವಳಿಗೆ ಮಾತ್ರವಲ್ಲದೆ ದೇಶಕ್ಕೆ ಹೆಮ್ಮೆ ತರುವಂತದ್ದು. ಈ ಸಾಧನೆಗೆ ಕೋಚ್‌ ರಾಜೇಂದ್ರ ಪ್ರಸಾದ್‌ ಕೊಡುಗೆ ದೊಡ್ಡದಿದೆ
ಪುಷ್ಟರಾಜ ಹೆಗ್ಡೆ, ವೇಟ್‌ಲಿಫ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.