ಬೆಂಗಳೂರು: ಲಾಟ್ವಿಯಾದಲ್ಲಿ ನಡೆದ ಐಬಿಎಸ್ಎಫ್ ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಜಯಿಸಿದ ಕರ್ನಾಟಕದ ಚಿತ್ರಾ ಮಗಿಮೈರಾಜ್ ಹಾಗೂ ರಾಷ್ಟ್ರೀಯ ಸ್ನೂಕರ್ ಟೂರ್ನಿಯಲ್ಲಿ ಚಿನ್ನ ಜಯಿಸಿದ ವಿದ್ಯಾ ಪಿಳೈ ಅವರನ್ನು ರಾಜ್ಯ ಬಿಲಿಯರ್ಡ್ಸ್ ಸಂಸ್ಥೆ (ಕೆಎಸ್ಬಿಎ) ವತಿಯಿಂದ ಸನ್ಮಾನಿಸಲಾಯಿತು.
ಬುಧವಾರ ನಡೆದ ಸಮಾರಂಭ ದಲ್ಲಿ ಚಿತ್ರಾ ಅವರಿಗೆ ಕೆಎಸ್ಬಿಎ ₨ 40,000 ಬಹುಮಾನ ನೀಡಿ ಸನ್ಮಾನಿಸಿತು.
2009ರಲ್ಲಿ ಹೈದರಾಬಾದ್ನಲ್ಲಿ ಜರುಗಿದ ಐಬಿಎಸ್ಎಎಫ್ ವಿಶ್ವ ಸ್ನೂಕರ್ ಟೂರ್ನಿಯಲ್ಲಿ ಚಿತ್ರಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.
ಆದರೆ, ಈ ಸಲ ಅವರಿಗೆ ಕಂಚು ಜಯಿಸಲು ಸಾಧ್ಯವಾಗಿದೆ. ಈ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಆಟಗಾರ್ತಿ ಜಯಿಸಿದ ಮೊದಲ ಪ್ರಶಸ್ತಿ ಇದಾಗಿದೆ.
ಲಖನೌನಲ್ಲಿ ನಡೆದ 6 ರೆಡ್ ರಾಷ್ಟ್ರೀಯ ಸ್ನೂಕರ್ ಟೂರ್ನಿಯಲ್ಲಿ ವಿದ್ಯಾ ಚಿನ್ನದ ಪದಕ ಜಯಿಸಿದ್ದರು. ಫೈನಲ್ನಲ್ಲಿ ಅವರು 4–2 ಫ್ರೇಮ್ ಗಳಿಂದ ನೀನಾ ಪ್ರವೀಣ್ ಅವರನ್ನು ಮಣಿಸಿದ್ದರು. ಇವರಿಗೆ ₨ 20,000 ಬಹುಮಾನ ನೀಡಲಾಯಿತು.
2000ನೇ ವರ್ಷದಲ್ಲಿ ಮೊದಲ ರಾಜ್ಯ ಸ್ನೂಕರ್ ಟೂರ್ನಿ ಆಡಿದ್ದ ವಿದ್ಯಾ, ಇದೇ ವರ್ಷ ಐರ್ಲೆಂಡ್ನಲ್ಲಿ ನಡೆದ ವಿಶ್ವ ಸ್ನೂಕರ್ ಟೂರ್ನಿಯ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.
‘ಅನಗತ್ಯ ಸಮಯದಲ್ಲಿ ಆಕ್ರಮಣಕಾರಿ ಆಟ ತೋರಿದ ಕಾರಣ ನಿರಾಸೆ ಅನುಭವಿಸಬೇಕಾಯಿತು. ಇಲ್ಲವಾದರೆ, ಇನ್ನು ಉತ್ತಮ ಸಾಧನೆ ತೋರಲು ಸಾಧ್ಯವಾಗುತ್ತಿತ್ತು’ ಎಂದು ಚಿತ್ರಾ ಬೇಸರ ವ್ಯಕ್ತಪಡಿಸಿದರು.
ಕೆಎಸ್ಬಿಎ ಅಧ್ಯಕ್ಷ ಬಾಲಸುಬ್ರಮಣಿ ಯಮ್ ಇದ್ದರು. ಈ ವೇಳೆ ಮಾತ ನಾಡಿದ ಅವರು ‘2014ರ ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ಐಬಿಎಸ್ಎಫ್ ಟೂರ್ನಿ ನಡೆಯಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.