ADVERTISEMENT

ಟೀಕೆ ಮಾಡಿದವರೇನು ಆಟ ಕಲಿಸಿಕೊಟ್ಟಿಲ್ಲ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ನಿವೃತ್ತಿಗೆ ಒತ್ತಡ ಹೆಚ್ಚಿಸುತ್ತಿರುವ ಟೀಕಾಕಾರರಿಗೆ ಶತಕಗಳ ಶತಕ ವೀರ ಸಚಿನ್ ತೆಂಡೂಲ್ಕರ್ ತಿರುಗೇಟು ನೀಡಿದ್ದಾರೆ. `ಟೀಕೆ ಮಾಡಿದವರೇನು ನನಗೆ ಕ್ರಿಕೆಟ್ ಆಟ ಕಲಿಸಿಕೊಟ್ಟಿಲ್ಲ~ ಎಂದು ನಿಯತಕಾಲಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆಟದ ಸತ್ವದ ಬಗ್ಗೆ ಅನುಮಾನ ಮೂಡಿದ ಕ್ಷಣವೇ ಆಡುವುದನ್ನು ನಿಲ್ಲಿಸುವುದಾಗಿ ಹೇಳಿರುವ ಅವರು `ಟೀಕೆ ಮಾಡುವವರು ನಾನೇನು ಮಾಡಬೇಕೆಂದು ಹೇಳಿಕೊಡುವ ಅಗತ್ಯವಿಲ್ಲ~ ಎಂದು ಸ್ಪಷ್ಟವಾಗಿ ನುಡಿದಿದ್ದಾರೆ.

`ಸಹ ಆಟಗಾರರ ಜೊತೆಗೆ ಸಾಲಿನಲ್ಲಿ ನಿಂತು ರಾಷ್ಟ್ರಗೀತೆ ಹಾಡುವಾಗ ಈಗಲೂ ರೋಮಾಂಚನಗೊಳ್ಳುತ್ತೇನೆ. ದೇಶಕ್ಕಾಗಿ ಆಡಲು ಪ್ರತಿಯೊಂದು ಬಾರಿ ಬ್ಯಾಟ್ ಎತ್ತಿಕೊಂಡಾಗಲೂ ಅಂಥದೇ ಅನುಭವ ಆಗುತ್ತದೆ~ ಎಂದಿರುವ ತೆಂಡೂಲ್ಕರ್ `ಆ ಜನ (ಟೀಕಾಕಾರರು) ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಅವುಗಳಿಗೆ ಅವರ ಬಳಿಯೇ ಸರಿಯಾದ ಉತ್ತರ ಇಲ್ಲ. ನಾನು ಏನು ಯೋಚನೆ ಮಾಡುತ್ತಿದ್ದೇನೆ ಹಾಗೂ ಎಂಥ ಮನೋಭಾವ ಹೊಂದಿದ್ದೇನೆಂದು ಅರ್ಥ ಮಾಡಿಕೊಳ್ಳಲು ಅವರಿಂದ ಸಾಧ್ಯವಾಗಿಲ್ಲ~ ಎಂದಿದ್ದಾರೆ.

ಬಾಂಗ್ಲಾದೇಶದ ವಿರುದ್ಧ ಏಷ್ಯಾಕಪ್ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ನೂರನೇ ಅಂತರರಾಷ್ಟ್ರೀಯ ಶತಕ ಪೂರೈಸಿದ ಸಚಿನ್ `ಆ ನೂರು ಗಳಿಸುವುದು ಬಹಳ ಕಷ್ಟವೇ ಆಗಿತ್ತು. ಅದು ಏಕೆಂದು ನನಗೂ ಗೊತ್ತಿಲ್ಲ. ಒಟ್ಟಿನಲ್ಲಿ ದೀರ್ಘ ಕಾಲ ಪ್ರಯತ್ನ ಮಾಡಬೇಕಾಯಿತು~ ಎಂದು ಪ್ರತಿಕ್ರಿಯಿಸಿದ್ದಾರೆ.

ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಚಾಂಪಿಯನ್ ಆದ ನಂತರ ಏಕದಿನ ನಿವೃತ್ತಿ ಹೊಂದಬಹುದೆಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ ಸ್ವತಃ ಸಚಿನ್ ಆ ಬಗ್ಗೆ ಯೋಚನೆ ಮಾಡಿರಲೇ ಇಲ್ಲ. ಅದನ್ನು ಅವರೇ ತಿಳಿಸಿದ್ದಾರೆ.
 
`ವಿಶ್ವಕಪ್ ನಂತರ ನನ್ನ ಅನೇಕ ಆತ್ಮೀಯ ಗೆಳೆಯರು ಕೂಡ ಈ ವಿಷವಾಗಿ ಕೇಳಿದ್ದರು. ಅವರ ಮಟ್ಟಿಗೆ ಆ ಪ್ರಶ್ನೆ ಸರಿ ಇರಬಹುದು. ಅದೊಂದು ಅದ್ದೂರಿ ವಿದಾಯ ಆಗುತ್ತದೆಂದು ಅವರೆಲ್ಲ ಅಂದುಕೊಂಡಿದ್ದೂ ಸಹಜ. ಆದರೆ ನನ್ನ ಮನದಲ್ಲಿ ಅಂಥ ವಿಚಾರ ಬಂದಿರಲೇ ಇಲ್ಲ~ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.